ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮೂವರು ಅಧಿಕಾರಿಗಳು ಸಂಚರಿಸುತ್ತಿದ್ದ ವಾಹನ ತಡೆದು ದಾಂದಲೆ ಮಾಡಿದ ಹಾಗೂ ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದ ಬಗ್ಗೆ ಬೈಕ್ ಸವಾರನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕೋಣಿಮಾರ್ ನಿವಾಸಿ ಶಂಶುದ್ದೀನ್ 22ವರ್ಷ ಬಂಧಿತ ಆರೋಪಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರಿನ ತಾಲೂಕು ಪಂಚಾಯಿತಿ ಎಡಿ ,ಎಚ್ ,ಒ ,ಸಿ ಸಭೆ ನಿಗದಿಯಾಗಿದ್ದು ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ವಿದ್ಯಾ ಮತ್ತು ನಿತ್ಯಾನಂದ ಚಿಂಬಾಳ್ಕರ್ ಹಾಗೂ ಲೆಕ್ಕಾಧೀಕ್ಷಕರಾದ ಶುಭ ಕುಮಾರಿಯವರು ಮಂಗಳೂರಿನಿಂದ ಇಲಾಖಾ ಜೀಪಿನಲ್ಲಿ ಹೊರಟಿದ್ದು ಹತ್ತು ಗಂಟೆ ಸುಮಾರಿಗೆ ತುಂಬೆ ತಲುಪಿದ್ದಾರೆ.
ಈ ವೇಳೆ ಇವರು ವಾಹನಕ್ಕಿಂತ ಮುಂದಿದ್ದ ಬೈಕ್ ರಸ್ತೆ ಗುಂಡಿಯನ್ನು ತಪ್ಪಿಸಲು ಬ್ರೇಕ್ ಹಾಕಿದ್ದು ಹೀಗಾಗಿ ಡಿಕ್ಕಿ ತಪ್ಪಿಸಲು ಇಲಾಖೆ ವಾಹನದ ಚಾಲಕ ವಾಹನವನ್ನು ನಿಧಾನಗೊಳಿಸಿದ್ದಾರೆ .ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಸಂಶುದ್ದೀನ್ ಜೀಪಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಉರುಳಿ ಬಿದ್ದು ಉರುಳಿದ್ದಾನೆ. ತುಸು ಸಮಯದ ಬಳಿಕ ಇಲಾಖಾ ವಾಹನವನ್ನು ಓವರ್ ಟೇಕ್ ಮಾಡಿದ ಸಂಶುದ್ದೀನ್ ಅದಕ್ಕೆ ಅಡ್ಡವಾಗಿ ಗಾಡಿ ನಿಲ್ಲಿಸಿ ತಡೆದಿದ್ದಾನೆ.
ಬಳಿಕ ಜೀಪ್ ಚಾಲಕನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಕಾರಿನ ಬಲಗಡೆ ಸೈಡ್ ಮಿರರ್ ಅನ್ನು ಮುರಿದು ಹಾಕಿದ್ದಾನೆ ಹಾಗೂ ಕಾರಿನ ಬಾನೆಟ್ ಕೈಯಿಂದ ಒಡೆದು ದಾಂಧಲೆ ಮಾಡಿದ್ದಾನೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .
ಈ ಬಗ್ಗೆ ಕಾರಿನ ಚಾಲಕ ದೇವದಾಸ್ ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸರಕಾರಿ ವಾಹನವನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಬೆದರಿಕೆ ಒಡ್ಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ವಿರುದ್ಧ ಪ್ರಕರಣ ದಾಖಲಿಸಿದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.