ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಹೆಚ್ಚುತ್ತಿವೆ. ಪಾರ್ಟ್ ಟೈಂ ಉದ್ಯೋಗ, ಎಟಿಎಂ ಪಿನ್, ಪಾಸ್ವರ್ಡ್ ಮೊದಲಾದ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಆದರೆ ಆಸ್ತಿ ನೋಂದಣಿಗೆ ಆಧಾರ್ ದತ್ತಾಂಶ ನೀಡಿದ ಹಲವರು ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ.
ಹೊಸ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ದಂಪತಿ ತಮ್ಮ ಆಧಾರ್ ಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ತಲಾ 10,000 ರೂ ಕಳೆದುಕೊಂಡಿದ್ದಾರೆ. ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಬಯೋಮೆಟ್ರಿಕ್ಸ್ ಮತ್ತು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಿವರ ನೀಡಿದ ನಂತರ ಅನೇಕರು ಇದೇ ರೀತಿ ಹಣವನ್ನು ಕಳೆದುಕೊಂಡಿರುವ ಬಗ್ಗೆ ದೂರಿಕೊಂಡಿದ್ದಾರೆ.
ಹೇಗೆ ನಡೆಯಿತು ವಂಚನೆ: ಕುಲಶೇಖರ ನಿವಾಸಿ ಲೋಕೇಶ್ ಎಂಬವರು ಆಗಸ್ಟ್ 30ರಂದು ಜಾಗ ಖರೀದಿ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಪತಿ- ಪತ್ನಿಯ ಜಂಟಿ ಖಾತೆಯ ಹೆಸರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು, ಇಬ್ಬರೂ ತಮ್ಮ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿದ್ದರು. ಸೆ.13ರಂದು ಲೋಕೇಶ್ ಮತ್ತು ಅವರ ಪತ್ನಿಯ ಖಾತೆಯಿಂದ ತಲಾ ಹತ್ತು ಸಾವಿರ ರೂ. ಹಣ ಕಡಿತಗೊಂಡಿತ್ತು. ಯಾವುದೇ ಫೋನ್ ಕರೆಯಾಗಲೀ, ಓಟಿಪಿ ಆಗಲೀ ಅವರಿಗೆ ಬಂದಿರಲಿಲ್ಲ. ಐದು ನಿಮಿಷಗಳ ಅಂತರದಲ್ಲಿ ಪತಿ- ಪತ್ನಿಯ ಬೇರೆ ಬೇರೆ ಬ್ಯಾಂಕಿನ ಖಾತೆಗಳಿಂದ ಹಣ ಕಟ್ ಆಗಿತ್ತು. ಆನಂತರ, ಇಬ್ಬರು ಕೂಡ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗಿರುವ ಬಗ್ಗೆ ಮೊಬೈಲಿಗೆ ಮೆಸೇಜ್ ಬಂದಿತ್ತು. ಎರಡರಲ್ಲೂ ಎಇಪಿಎಸ್ ಮೂಲಕ ಹಣ ಕಟ್ ಆಗಿರುವುದಾಗಿ ಮೆಸೇಜ್ ಇತ್ತು ಎಂದು ಲೋಕೇಶ್ ದೂರಿನಲ್ಲಿ ಹೇಳಿದ್ದಾರೆ.
ಅದೇ ರೀತಿ ಇನ್ನೋರ್ವ ಸಂತ್ರಸ್ತ ಈ ಬಗ್ಗೆ ಮಾತನಾಡಿರುವ ಇನ್ನೊಬ್ಬ ಸಂತ್ರಸ್ತ ರೋಹಿತ್, “ನಾನು ಹೊಸ ಆಸ್ತಿಯನ್ನು ಖರೀದಿಸಿದೆ ಮತ್ತು ಅದನ್ನು ನನ್ನ ಹೆಸರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲು ಅರ್ಜಿ ಸಲ್ಲಿಸಿದೆ. ನಾನು ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಎಇಪಿಎಸ್ ವಹಿವಾಟಿನ ವಿಧಾನದಲ್ಲಿ ಹಣವನ್ನು ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು.
ತಕ್ಷಣ ನಮ್ಮ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿ ಪೊಲೀಸ್ ದೂರು ದಾಖಲಿಸಿದ್ದೇವೆ. ಹಣವನ್ನು ಕಳೆದುಕೊಳ್ಳುವ ಕೇವಲ 10 ದಿನಗಳ ಮೊದಲು ನಾವು ನಮ್ಮ ಬೆರಳಚ್ಚು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಹೊಸ ಆಸ್ತಿ ನೋಂದಣಿಗಾಗಿ ಉಪ-ನೋಂದಣಿ ಕಚೇರಿಯಲ್ಲಿ ಮಾತ್ರ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.