ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಪ್ರಸಿದ್ಧ ಜನಪದ ಕ್ರೀಡೆ ಆಯೋಜನೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 25 ಮತ್ತು 26 ರಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗುತ್ತಿದೆ.
ಕಂಬಳಕ್ಕೆ ನಟಿ ಐಶ್ವರ್ಯ ರೈ ಹಾಗೂ ನಟ ರಜಿನಿಕಾಂತ್ ಅವರನ್ನು ಕರೆಸಲು ಸಮಿತಿ ಪ್ರಯತ್ನಿಸುತ್ತಿದೆ. ಸದ್ಯ ನಟಿ ಅನುಷ್ಕಾ ಶೆಟ್ಟಿ ಅವರು ಕಂಬಳಕ್ಕೆ ಬರುವುದು ಪಕ್ಕಾ ಆಗಿದೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿ ಎಲ್ಲಾ ಚಿತ್ರರಂಗದ ಗಣ್ಯರಿಗೆ ಆಹ್ವಾನಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಹೇಳಿದ್ದಾರೆ.
ನನ್ನ ಹೆಸರಿನಲ್ಲಿ ಕೋಣ ಓಡಿಸಿ ಎಂದ ಡಿಸಿಎಂ ಡಿಕೆಶಿ: ಮತ್ತೊಂದೆಡೆ ತಮ್ಮ ಹೆಸರಿನಲ್ಲಿ ಒಂದು ಜೊತೆ ಕೋಣ ಓಡಿಸುವಂತೆ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಸುಧಾಕರ್ ಸೇರಿ ಹಲವು ಸಚಿವರು ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕೋಣ ಕೊಡಲು ಕೋಣದ ಮಾಲೀಕರು ಒಪ್ಪುತ್ತಿಲ್ಲ. ಪ್ರತಿಷ್ಠೆಗೆ ನಡೆಯುವ ಕಂಬಳದಲ್ಲಿ ತಮ್ಮ ಕೋಣಗಳನ್ನು ಬೇರೆಯವರ ಹೆಸರಿಗೆ ಕೊಡಲು ಕೋಣ ಮಾಲೀಕರು ನಕಾರ ಮಾಡುತ್ತಿದ್ದಾರೆ. ಕಂಬಳ ಸಮಿತಿ ಸಭೆಯಲ್ಲಿ ಕೋಣ ಕೊಡಲು ನಿರಾಕರಿಸಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಹೇಳಿದ್ದಾರೆ.
ಮಿನರಲ್ ವಾಟರ್ ಬೇಡ: ಕರಾವಳಿಯ ನೀರೇ ಕೊಡಿ: ಕಂಬಳ ಪೂರ್ವಭಾವಿ ಸಭೆಯಲ್ಲಿ ಕೋಣಗಳ ಮಾಲೀಕರು ಕೋಣಗಳಿಗೆ ಕುಡಿಯುವ ನೀರಿನಲ್ಲೂ ಡಿಮ್ಯಾಂಡ್ ಮಾಡಿದ್ದಾರೆ. ಹೀಗಾಗಿ ಕೋಣಗಳಿಗೆ ಕುಡಿಯಲು ಮಿನರಲ್ ವಾಟರ್ ಕೊಡಿಸುವುದಾಗಿ ಸಮಿತಿ ಹೇಳಿದೆ. ಆದರೆ ಅದಕ್ಕೊಪ್ಪದ ಮಾಲೀಕರು ಕರಾವಳಿಯ ನೀರನ್ನೇ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಟ್ಯಾಂಕರ್ಗಳ ಮೂಲಕ ಕರಾವಳಿಯ ನೀರನ್ನು ಬೆಂಗಳೂರಿಗೆ ತರಲು ಚಿಂತನೆ ನಡೆದಿದೆ. ಇದರ ಜೊತೆಗೆ ಪಶು ಆಂಬುಲೆನ್ಸ್, ಪಶು ವೈದ್ಯಾಧಿಕಾರಿಗಳ ಜೊತೆ ಲಾರಿಗಳ ಮೂಲಕ ಕೋಣಗಳನ್ನು ಬೆಂಗಳೂರಿಗೆ ಕರೆ ತರಲು ಸಿದ್ಧತೆ ನಡೆದಿದೆ.