ಬೆಳ್ತಂಗಡಿ: ಸುಮಾರು ಎರಡು ತಿಂಗಳಿಂದ ಸದ್ದು ಮಾಡದ ಕಾಡಾನೆಗಳು ಮತ್ತೆ ಕೃಷಿ ತೋಟಗಳಿಗೆ ದಾಳಿ ಆರಂಭಿಸಿವೆ.
ಕಳೆದೊಂದು ವಾರದಿಂದ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬಾರೆ,ಕುಂಚಾಡಿ,ಮುದ್ದಿನಡ್ಕ ಮೊದಲಾದ ಪ್ರದೇಶಗಳ ಕೃಷಿ ತೋಟಗಳಿಗೆ ದಾಳಿ ಇಟ್ಟಿರುವ ಕಾಡಾನೆಗಳು ಅಡಕೆ, ತೆಂಗು,ಬಾಳೆ ಕೃಷಿಗೆ ಹಾನಿ ಉಂಟು ಮಾಡಿವೆ.
ಉಪವಲಯ ಅರಣ್ಯಾಧಿಕಾರಿ ಭವಾನಿ ಶಂಕರ್ ಹಾಗೂ ಸಿಬ್ಬಂದಿಗಳು ಆನೆಗಳು ದಾಳಿ ನಡೆಸಿರುವ ಸ್ಥಳ ಹಾಗೂ ಸುತ್ತಮುತ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಅಥವಾ ಹೆಚ್ಚಿನ ಆನೆಗಳ ಗುಂಪು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಚಾರ್ಮಾಡಿ-ಕನಪಾಡಿ, ಮುಂಡಾಜೆ- ಕಾಪು ರಕ್ಷಿತಾರಣ್ಯ ಪ್ರದೇಶದ ಚಾರ್ಮಾಡಿ,ಚಿಬಿದ್ರೆ, ತೋಟತ್ತಾಡಿ, ಮುಂಡಾಜೆ, ನೆರಿಯ,ಕಡಿರುದ್ಯಾವರ ಮೊದಲಾದ ಕಡೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಗೆ ಹಲವಾರು ಎಕರೆ ಕೃಷಿ ಭೂಮಿ ಈಗಾಗಲೇ ನಾಶವಾಗಿದೆ. ಈಗ ಮತ್ತೆ ಇಲ್ಲಿ ಕಾಡಾನೆಗಳು ಸದ್ದು ಮಾಡತೊಡಗಿವೆ.