ಬೆಳ್ತಂಗಡಿ: ಚಾರ್ಮಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಮಠದ ಮಜಲು ಪರಿಸರದಲ್ಲಿ ಮೇ 13ರ ತಡರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿವೆ.
ಇಲ್ಲಿನ ರವೀಂದ್ರ ರಾವ್ ಅವರ ತೋಟದಲ್ಲಿ 120 ಅಡಕೆ ಮರ, 60ಕ್ಕಿಂತ ಅಧಿಕ ಬಾಳೆ ಗಿಡ, ಅನಂತ ರಾವ್ ಅವರ ತೋಟದ 25ಕ್ಕಿಂತ ಅಧಿಕ ಅಡಕೆ ಮರ,18 ತೆಂಗಿನ ಮರ ಹಾಗೂ ಅಪಾರ ಪ್ರಮಾಣದ ಬಾಳೆಗಿಡಗಳನ್ನು ಧ್ವಂಸಗೊಳಿಸಿ ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ ಉಂಟು ಮಾಡಿವೆ.
ಮರಿಯಾನೆ ಸಹಿತ ನಾಲ್ಕರಿಂದ ಐದು ಆನೆಗಳು ದಾಳಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗಾಗ ದಾಳಿ
ಮಠದ ಮಜಲು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು ಕಳೆದ ಮೂರು ತಿಂಗಳಿನಿಂದ ಹಲವಾರು ಬಾರಿ ಒಂಟಿ ಸಲಗ ಸಹಿತ ಕಾಡಾನೆಗಳ ಹಿಂಡು ದಾಳಿ ನಡೆಸುತ್ತಿದ್ದು, ಇಲ್ಲಿನ ಕೃಷಿಕರ ತೋಟಗಳನ್ನು ನಾಶ ಮಾಡುತ್ತಿವೆ. ಆನೆ ದಾಳಿಯಿಂದ ಬೇಸತ್ತಿರುವ ಕೃಷಿಕರು ಇದಕ್ಕೊಂದು ಸೂಕ್ತ ಮಾರ್ಗೋಪಾಯ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.