ಬೆಳ್ತಂಗಡಿ: ಅಸೌಖ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರ ಪರಿಸ್ಥಿತಿಯನ್ನು ಅರಿತು ಅಡಿಕೆ ಗಿಡಗಳನ್ನು ನಾಟಿ ಮಾಡಿಕೊಟ್ಟು ಮಾನವೀಯ ಕಾರ್ಯ ಮಾಡಿದ್ದಾರೆ ನಡ ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು.
ನಡ ಗ್ರಾಮದ ನಡಿಬೆಟ್ಟು ಮನೆಯ ಅಶೋಕ್ ಗೌಡ ಎನ್ನುವವರು ಕಳೆದ ನಾಲ್ಕು ತಿಂಗಳಿಂದ ಅಸೌಖ್ಯದಿಂದ ಇದ್ದು ಇವರಿಗೆ ದುಡಿಯುವ ಸಾಮಥ್ರ್ಯವು ಇಲ್ಲದಂತಹ ಪರಿಸ್ಥಿತಿಯಲ್ಲಿದ್ದಾರೆ.
ಇವರ ಪತ್ನಿ ಎರಡು ಸಣ್ಣ ಪುಟ್ಟ ಮಕ್ಕಳು, ಪತ್ನಿ ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದು ಇವರ ಜೀವನ ತುಂಬಾ ಕಷ್ಟಕರವಾಗಿದೆ. ಇದನ್ನು ಗಮನಿಸಿದ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿ ಅವರ ಸಲಹೆಯಂತೆ ಅಡಿಕೆ ಗಿಡಗಳನ್ನು ನಾಟಿ ಮಾಡಿ ಕೊಟ್ಟಿರುತ್ತಾರೆ.
ತಂಡದ ಸ್ವಯಂಸೇವಕರಾದ ಓಲ್ವಿನ್ ಡಿಸೋಜ ಹಾಗೂ ಹರಿಶ್ಚಂದ್ರ. ರವರು 100 ಅಡಿಕೆ ಗಿಡವನ್ನು ಉಚಿತವಾಗಿ ನೀಡಿರುತ್ತಾರೆ. ಗುಂಡಿಗಳನ್ನು ತೆಗೆದು ಗೊಬ್ಬರವನ್ನು ಹೊತ್ತು ಹಾಕಿ ತಂಡದ ಎಲ್ಲಾ ಸ್ವಯಂ ಸೇವಕರು ಸೇರಿ ಗಿಡವನ್ನು ನಾಟಿ ಮಾಡಿರುತ್ತಾರೆ.
ನಾಟಿ ಮಾಡಿದ ಗಿಡಗಳನ್ನು ನಿರ್ವಹಣೆಯ ಜವಾಬ್ದಾರಿಯನ್ನು ಅಶೋಕ್ ಗೌಡ ರವರು ಗುಣಮುಖರಾಗುವ ವರೆಗೆ ಸ್ವಯಂಸೇವಕರು ನಿರ್ವಹಿಸುವುದೆಂದು ತೀರ್ಮಾನಿಸಲಾಗಿದೆ.
ಸ್ವಯಂಸೇವಕರ ಈ ಸೇವೆಗೆ ಕುಟುಂಬದ ಸದಸ್ಯರು ಮೆಚ್ಚುಗೆ ಸೂಚಿಸಿದ್ದು ತೊಂದರೆಯಲ್ಲಿ ಇರುವ ನಮಗೆ ಬಹಳ ಉಪಕಾರವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಗಿಡಗಳನ್ನು ನೆಡುವ ಶ್ರಮದಾನವು ಬೆಳಿಗ್ಗೆ 9 ರಿಂದ ಸಂಜೆ 5-30ರ ತನಕ ನಡೆದಿದ್ದು ಎಲ್ಲಾ ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿರುತ್ತಾರೆ.
ಉಜಿರೆ ಘಟಕದ ಪ್ರತಿನಿಧಿ ರವೀಂದ್ರ, ನಡ ಕನ್ಯಾಡಿ ಘಟಕದ ಮಂಜುನಾಥ್, ಒಲ್ವಿನ್ ಡಿಸೋಜ, ಹರಿಶ್ಚಂದ್ರ, ಕಾರ್ತಿಕ್, ಮೋಹನ್, ಅನಿಲ್ ಡೇಸಾ. ಜೀವನ್ ಡಿಸೋಜ, ಜಯರಾಮ್, ಗೋಪಾಲ್, ಆರ್ವಿನ್, ಮಿರಾಂದ, ಕೇಶವ, ಲೀಲಾ ಪುಷ್ಪಲತಾ, ಶ್ರಮದಾನದಲ್ಲಿ ಭಾಗವಹಿಸಿದ್ದರು.