ಬೆಳ್ತಂಗಡಿ: ಅನಾರೋಗ್ಯ ಕಾರಣ ಮತ್ತು ಜ್ವರ ಬಾದಿಸಿದ್ದರಿಂದ 12 ಗಂಟೆಯ ಅವಧಿಯೊಳಗೆ ಎಳೆಯ ಸಹೋದರಿಬ್ಬರು ಮೃತಪಟ್ಟ ಘಟನೆ ಮದ್ದಡ್ಕ ಸನಿಹದ ಲಾಡಿಯಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಲಾಡಿ ಅಜಿರ್ಮಾರ್ ನಿವಾಸಿ, ಮೆಸ್ತ್ರಿ ಕೆಲಸಗಾರ ಅಬ್ಬಾಸ್ ಮತ್ತು ಮೈಮುನಾ ದಂಪತಿ ಪುತ್ರರಾದ ಮುಹಮ್ಮದ್ ಸಿನಾನ್(9) ಮತ್ತು ಮುಹಮ್ಮದ್ ಸಫ್ವಾನ್(4) ಎಂದು ಗುರುತಿಸಲಾಗಿದೆ.
ಈ ಪೈಕಿ ಕಿರಿಯ ಮಗ ಮುಹಮ್ಮದ್ ಸಫ್ವಾನ್ ಅ.24 ರಂದು ಮಧ್ಯಾಹ್ನ ನಿಧನರಾದರೆ ಮುಹಮ್ಮದ್ ಸಿನಾನ್ ಅ.25 ರಂದು ಬೆಳಿಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಸಫ್ವಾನ್ ಕೆಲ ಸಮಯಗಳಿಂದ ಕೆಲ ಆಂತರಿಕ ಅನಾರೋಗ್ಯಗಳಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಅಣ್ಣ ಸಿನಾನ್ ಅವರಿಗೂ ಸೇರಿ ಕಳೆದ ಗುರುವಾರದಿಂದ ಜ್ವರ ಕಾಣಿಸಿಕೊಂಡಿತ್ತು. ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ ಎಂಬಂತೆ ಔಷಧಿ ನೀಡಲಾಗಿತ್ತು. ಆದರೆ ಜ್ವರ ಕಡಿಮೆಗೊಳ್ಳದ್ದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಕಿರಿಯ ಮಗ ಸೋಮವಾರ ಮೃತಪಟ್ಟರೆ ಮರುದಿನ ಹಿರಿಯ ಮಗ ಕೂಡ ಮೃತಪಟ್ಟಿದ್ದಾರೆ.
ಅಬ್ಬಾಸ್ ಅವರಿಗೆ ಇಬ್ಬರೇ ಗಂಡು ಮಕ್ಕಳಿದ್ದು, ಇದೀಗ ಇಬ್ಬರೂ ಮೃತಪಟ್ಟಿದ್ದು, ತಂದೆ ತಾಯಿ ಮತ್ತು ಕುಟುಂಬಸ್ಥರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.
ಅಕ್ಕಪಕ್ಕದಲ್ಲಿ ಸಹೋದರರ ಅಂತ್ಯಕ್ರಿಯೆ
ಕೇವಲ 12 ಗಂಟೆ ಅಂತರದಲ್ಲಿ ಕೊನೆಯುಸಿರೆಳೆದ ಮಕ್ಕಳನ್ನು ಲಾಡಿ ಮಸ್ಜಿದ್ ದಫನ ಭೂಮಿಯಲ್ಲಿ ಅಕ್ಕಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸಫ್ವಾನ್ ಅವರ ಅಂತ್ಯಸಂಸ್ಕಾರ ರಾತ್ರಿ ನಡೆದಿದ್ದರೆ ಸಿನಾನ್ ಅವರ ಅಂತ್ಯಸಂಸ್ಕಾರ ಮಂಗಳವಾರ ಮಧ್ಯಾಹ್ನ ನಡೆಸಲಾಗಿದೆ.