ಬೆಳ್ತಂಗಡಿ: ಯಾವುದೇ ಕೆಲಸ ಕಾರ್ಯಗಳು ಯಶಸ್ವಿಯಾಗಿ ಜರಗಲು ಮಾತೃಶಕ್ತಿಯ ಸಹಕಾರ ನಿರಂತರವಾಗಿರಬೇಕು. ಮಹಿಳೆಯರು ತಂಡವಾಗಿ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಕೆಲಸಗಳು ಸುಲಲಿತವಾಗಿ ನಡೆಯುತ್ತವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬುಧವಾರ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಜರಗಿದ ಮಹಿಳಾ ಸಮಾವೇಶ ಹಾಗೂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನಗಳ ಬ್ರಹ್ಮಕಲಶ,ಜೀರ್ಣೋದ್ಧಾರಗಳು ಊರಿನ ಶಾಂತಿ,ನೆಮ್ಮದಿ, ಅಭಿವೃದ್ಧಿಗೆ ಕಾರಣವಾಗುತ್ತವೆ. ಈ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಅಪರೂಪ. ಸಿಕ್ಕಿರುವ ಅವಕಾಶವನ್ನು ಭಕ್ತಿ, ಶ್ರದ್ಧೆಯಿಂದ ಬಳಸಿಕೊಂಡು ದೇವರ ಕಾರ್ಯದಲ್ಲಿ ಭಾಗಿಯಾಗುವಂತೆ ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತುಕಾರಾಮ ಸಾಲಿಯಾನ್,ಉಪಾಧ್ಯಕ್ಷರಾದ ಶ್ರೀನಿವಾಸ್ ರಾವ್,ರವಿ ಕುಮಾರ್ ಭಟ್,ಖಜಾಂಚಿ ಪಾಂಡುರಂಗ ಕಾಕತ್ಕರ್,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್,ಮಹಿಳಾ ಸಮಿತಿ ಅಧ್ಯಕ್ಷೆ ಚಿತ್ರಾ ಭಿಡೆ, ಶಶಿಧರ ಕಲ್ಮಂಜ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಗಳು ಜ. 31ರಿಂದ ಫೆ.5ರ ತನಕ ಹಾಗೂ ವಾರ್ಷಿಕ ಜಾತ್ರೆ ಫೆ.6ರಂದು ನಡೆಯಲಿದೆ. ಫೆ.2ರಂದು ಮಾತೃ ಸಂಗಮ ಕಾರ್ಯಕ್ರಮ ಆಯೋಜಿಸುವ ಕುರಿತು ನಿರ್ಣಯಿಸಲಾಯಿತು. ಪ್ರತಿವಾರ ದೇವಸ್ಥಾನದ ವಠಾರದಲ್ಲಿ ಶ್ರಮದಾನ,ಸ್ವಚ್ಛತೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದ್ದು ಊರವರ ಸಹಕಾರ ಕೋರಲಾಯಿತು.
50 ಲಕ್ಷ ರೂ. ಅನುದಾನ, ರಸ್ತೆ ಅಭಿವೃದ್ಧಿ
ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಇತರ ಕಾಮಗಾರಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಮೂಲಕ 50 ಲಕ್ಷ ರೂ. ಅನುದಾನ ಹಾಗೂ ಬ್ರಹ್ಮಕಲಶೋತ್ಸವದ ಸಮಯದೊಳಗೆ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕುರಿತು ಶಾಸಕರು ಭರವಸೆ ನೀಡಿದರು.