ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ಬೆಳ್ತಂಗಡಿ ತಾಲೂಕಿನಲ್ಲಿ ಹೈನುಗಾರರ ಸಂಖ್ಯೆ ಹೆಚ್ಚಿದ್ದು ಪ್ರತೀನಿತ್ಯ ೧.೨೦ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ದ.ಕ ಜಿಲ್ಲಾ ಸಹಕಾರಿ ಸಂಘದಿಂದ ರೈತರಿಗೆ ನೀಡಬೇಕಾದ ಗರಿಷ್ಠ ಸೌಲಭ್ಯವನ್ನು ನೀಡುತ್ತಿದ್ದು ಇದರಿಂದ ಹಾಲಿನ ಸಂಗ್ರಹ ಹೆಚ್ಚಾಗಿದೆ. ದ.ಕ ಜಿಲ್ಲಾ ಹಾಲು ಒಕ್ಕೂಟವು ಹಾಲು ಉತ್ಪನ್ನಗಳ ಪ್ರಮಾಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ ಎಂದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದ್ದಾರೆ.
ಅವರು ಸೋಮವಾರ ಶ್ರೀ ಧ.ಮಂ. ಪಿನಾಕಿ ಸಭಾಭವನದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಹೈನುಗಾರರ ಸಮಸ್ಯೆ ಮತ್ತು ಬೇಡಿಕೆಯನ್ನು ಒಕ್ಕೂಟವು ಗಮನದಲ್ಲಿಟ್ಟುಕೊಂಡು ಈಡೇರಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಒಕ್ಕೂಟದ ನಿರ್ದೇಶಕ ನಿರಂಜನ ಭಾವಂತಬೆಟ್ಟು ಮಾತನಾಡಿ ಪ್ರಸ್ತುತ ಸ್ಥಿತಿಗತಿಯಲ್ಲಿ ದ.ಕ ಜಿಲ್ಲೆಯ ಹೈನುಗಾರರು ನಷ್ಟ ಅನುಭವಿಸುತ್ತಿದ್ದು ಹೈನುಗಾರರು ತಮ್ಮ ನೋವನ್ನು ಯಾರಲ್ಲಿಯೂ ಹೇಳದಂತಹ ಸ್ಥಿತಿಗೆ ಬಂದಿದ್ದಾರೆ. ಹೈನುಗಾರರಿಗೆ ಲೀಟರ್ಗೆ ಕನಿಷ್ಠ ೫೦ರೂ. ನೀಡಬೇಕು ಇದರಿಂದ ಹೈನುಗಾರರು ತಮ್ಮ ವೃತ್ತಿಯಲ್ಲಿ ಆಸಕ್ತಿ ತೋರಬಹುದು ಎಂದರು.
ಸಭೆಯಲ್ಲಿ ಸಂಘದ ಸಿಬ್ಬಂದಿಗಳಿಗೆ ಕನಿಷ್ಟ ವೇತನ ನೀಡುವ ಬಗ್ಗೆ, ಇ.ಎಂ.ಟಿ ನಿರ್ವಹಣೆ ಬಗ್ಗೆ, ಬಿ.ಎಂ.ಸಿ ಹಾಲಿನ ತೂಕ, ಪರೀಕ್ಷೆ, ಗುಣಮಟ್ಟಕ್ಕೆ ಸಂಬಂದಿಸಿದ ವಿಷಯಗಳ ಬಗ್ಗೆ, ಪಶು ಆಹಾರ, ಖನಿಜ ಮಿಶ್ರಣ, ಮೇವಿನ ಬೇರು/ಕಾಂಡ ಹಾಗೂ ಬೀಜದ ಸರಬರಾಜು ಬಗ್ಗೆ, ಪಶುವೈದ್ಯಕೀಯ ಕೃತಕ ಗರ್ಭಧಾರಣೆ ಸೇವೆಯ ಬಗ್ಗೆ ಚರ್ಚೆ ನಡೆಯಿತು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಭೆಯಲ್ಲಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ್ ರೈ, ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ, ಸುಧಾಕರ ರೈ, ಸವಿತಾ ಶೆಟ್ಟಿ, ಸುಭದ್ರಾ ರಾವ್, ದ.ಕ ಜಿಲ್ಲಾ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ, ಡಾ| ನಿತ್ಯಾನಂದ ಭಕ್ತ ವ್ಯವಸ್ಥಾಪಕರು ಶೇಕಡ ಮತ್ತು ತಾಂತ್ರಿಕ ಮೊದಲಾದವರು ಉಪಸ್ಥಿತರಿದ್ದರು.
ಒಕ್ಕೂಟದ ನಿರ್ದೇಶಕ ನಿರಂಜನ ಭಾವಂತಬೆಟ್ಟು ಸ್ವಾಗತಿಸಿ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ ವಂದಿಸಿ, ತಾಂತ್ರಿಕ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ ಕಾರ್ಯಕ್ರಮ ನಿರೂಪಿಸಿದರು.