ಬೆಳ್ತಂಗಡಿ: ದ.ಕ ಜಿಲ್ಲೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿದ್ದು, ಪೊಲೀಸರ ಎದುರೇ ವ್ಯಕ್ತಿಯೋರ್ವನಿಗೆ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಗೂಂಡಾಗಿರಿ ನಡೆಸುತ್ತಿದ್ದರೂ ಮೂಕಪ್ರೇಕ್ಷಕರಂತೆ ವರ್ತಿಸಿದರು ಎಂಬ ಆರೋಪ ಕೇಳಿಬಂದಿದೆ.
ಉಜಿರೆಯಿಂದ ಚಾರ್ಮಾಡಿಗೆ ಬಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಚಾರ್ಮಾಡಿ ಬಳಿ ಬಸ್ ನಿಲ್ಲಿಸಲು ವಿದ್ಯಾರ್ಥಿಗಳು ಸೂಚಿಸಿದ್ದರು. ಆದರೆ ವೇಗದೂತ ಬಸ್ ಆಗಿರುವ ಕಾರಣ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಸ್ ಕಂಡೆಕ್ಟರ್ ಹೇಳಿದ್ದ ಎನ್ನಲಾಗಿದೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಕಂಡೆಕ್ಟರ್ ನಡುವೆ ನಡೆದ ವಾಗ್ವಾದ ನಡೆದಿದೆ. ಕಂಡೆಕ್ಟರ್ ಮಾತಿಗೆ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಬೆಂಬಲ ಸೂಚಿಸಿದ್ದರು. ಈ ವೇಳೆ ಪ್ರಯಾಣಿಕನ ಮೇಲೆ ಮುಗಿಬಿದ್ದ ವಿದ್ಯಾರ್ಥಿಗಳು, ಬೇರೆ ಯುವಕರನ್ನು ಕರೆಸಿ ಬಸ್ ಅಡ್ಡ ಹಾಕಿ ದಾಂಧಲೆ ಮೆರೆದಿದ್ದಾರೆ.
ಪೊಲೀಸರ ಎದುರೇ ದಾಂಧಲೆ ಮಾಡಿದ ವಿದ್ಯಾರ್ಥಿಗಳು, ಮಹಿಳೆಯರ ಎದುರೇ ಅವ್ಯಾಚ್ಯ ಶಬ್ಧಗಳಿಂದ ಪ್ರಯಾಣಿಕನಿಗೆ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಗೂಂಡಾಗಿರಿ ದೃಶ್ಯವನ್ನು ಮೊಬೈಲ್ ನಲ್ಲಿ ಬಸ್ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಈವರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.