ಬೆಂಗಳೂರು: ”ಗೃಹಜ್ಯೋತಿ” ಯೋಜನೆಗೆ ಲಾಭಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಆದಷ್ಟು ಶೀಘ್ರವೇ ”ಗೃಹ ಲಕ್ಷ್ಮೀ” ಯೋಜನೆಗಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಮಹಿಳೆ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದ್ದಾರೆ.
ಭಾನುವಾರ ಜಿಲ್ಲೆಯ ಬಸ್ತವಾಡದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ವಿಳಂಬವಾಗಿದೆ. ಜೂನ್ 15 ರಂದು ಅರ್ಜಿ ಸಲ್ಲಿಕೆ ಆರಂಭ ಎಂದು ಹೇಳಲಾಗಿತ್ತು, ಕೆಲ ಕಾರಣಗಳಿಂದ ಇಂದು ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭಿಸಿದ್ದೇವೆ ಎಂದರು.
ಇನ್ನೂ ಗೃಹ ಜ್ಯೋತಿ ನಂತರ ‘ಗೃಹ ಲಕ್ಷ್ಮಿ’ ಯೋಜನೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಿದ್ದೇವೆ. ಸಾಫ್ಟವೇರ್, ಆಪ್ ರೆಡಿ ಮಾಡಲಾಗುತ್ತಿದೆ. ಈ ಸಂಬಂಧ ವಿಳಂಬವಾಗಿದೆ. ಈಗಾಗಲೇ ಜಾಹೀರಾತು ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಯಿತು. ‘ಗೃಹ ಲಕ್ಷ್ಮೀ’ ಅಪ್ಲಿಕೇಶನ್ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ.
‘ಗೃಹ ಲಕ್ಷ್ಮೀ’ ಯೋಜನೆ ಸಂಬಂಧ ಪ್ರತಿ ಬೂತ್ ಮಟ್ಟದಲ್ಲಿ ಮಹಿಳೆ ಸೇರಿದಂತೆ ಒಟ್ಟು 4 ಮಂದಿ ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ ಸುಮಾರು 1,13 ಲಕ್ಷ ಕುಟುಂಬದ ಯಜಮಾನಿಯರು ಯೋಜನೆ ಲಾಭ ಪಡೆಯಲಿದ್ದಾರೆ. ಅವರೆಲ್ಲರ ಖಾತೆಗೂ ಸರ್ಕಾರವು ಮಾಸಿಕ 2000 ರೂ. ಜಮೆ ಮಾಡಲಿದೆ. ಗೃಹ ಲಕ್ಷ್ಮಿ ಯೋಜನೆ ವಿಚಾರವಾಗಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಸೂಕ್ಷ್ಮವಾಗಿ ಸಾಪ್ಟವೇರ್ ಸಿದ್ದಪಡಿಸುತ್ತಿದ್ದೇವೆ. ಆದಷ್ಟು ಶೀಘ್ರವೇ ಅದನ್ನು ಬಿಡುಗಡೆ ಮಾಡಿ, ಅರ್ಜಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅವರು ಹೇಳಿದರು.