ಬೆಳ್ತಂಗಡಿ: ರಥ ಮುನ್ನಡೆಯಲು ಸಮರ್ಥ ಸಾರಥಿ, ಕುದುರೆ ಎಲ್ಲ ಬೇಕು. ಪಲ್ಲಕಿ ಹೊರಲು ಏಕಮನಸ್ಸಿನ ಸಮರ್ಥ ಯುವಕರು ಬೇಕು. ಅಂತೆಯೇ ಸಂಘಟನೆ ಬಲಿಷ್ಠಗೊಳ್ಳಲು ಎಲ್ಲರೂ ಏಕಮನಸ್ಸಿನ ಸದೃಢರಾಗಿರಬೇಕು. ಎಲ್ಲರ ಸಹಕಾರವಿದ್ದರೆ ಮಾತ್ರ ಸಂಘಟನೆ ಮುನ್ನಡೆಯುವುದು ಎಂದು ತುಳು ಶಿವಳ್ಳಿ ಧರ್ಮಸ್ಥಳ ವಲಯದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀಪತಿ ಅರ್ಮುಡತ್ತಾಯ ಹೇಳಿದರು.
ಅವರು ಸೆ.28ರಂದು ಧರ್ಮಸ್ಥಳದ ಗೌರಿ ಶಂಕರ ಕೃಪದಲ್ಲಿ ನಡೆದ ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ನೂತನ ತಂಡದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸುವುದಾಗಿಯೂ ,ಮುಂದಿನ ಸಭೆಯು ನ . 26ರಂದು ಮುಂಡ್ರು ಪ್ಪಾಡಿ ಭಾಸ್ಕರ ರಾವ್ ಅವರ ಮನೆಯಲ್ಲಿ ನಡೆಯಲಿದ್ದು ಎಲ್ಲರೂ ಭಾಗವಹಿಸುವಂತೆ ವಿನಂತಿಸಿಕೊಂಡರು.
ತಾಲೂಕು ಉಪಾಧ್ಯಕ್ಷ ನಾಗೇಶ್ ರಾವ್ ಅವರು ಅಧ್ಯಕ್ಷ ಹಾಗು ಕೋಶಾಧಿಕಾರಿ ಗಣೇಶ್ ಭಟ್ ಅವರಿಗೆ ಪ್ರಮಾಣವಚನ ಬೋಧಿಸಿ ಶುಭ ಕೋರಿದರು. ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ನೂರಿತ್ತಾಯ ತನ್ನ ಅಧ್ಯಕ್ಷಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಪಡುವೆಟ್ನಾಯ ಗತ ಸಭೆಯ ವರದಿ ಮಂಡಿಸಿದರು. ಮುಖ್ಯ ಅತಿಥಿ ಕ್ಷೇತ್ರದ ಮಣೆಗಾರ್ ವಸಂತ ಮಂಜಿತ್ತಾಯ ಅವರು ವಲಯದ ಪ್ರತಿ ಸದಸ್ಯರೂ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿ,ಹೊಸ ಕಾರ್ಯಕ್ರಮ, ಆರೋಗ್ಯ ಶಿಬಿರ, ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ಸದಾ ಚಟುವಟಿಕೆಯಿಂದಿರಬೇಕು ಎಂದರು.
ಗೌರವಾಧ್ಯಕ್ಷ ಗಿರೀಶ್ ಕುದ್ರೆನ್ತಯ ವಲಯದ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು. ತುಳು ಶಿವಳ್ಳಿ ವಲಯದ ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ ಹರಿಹರಾನುಗ್ರಹ ಸಭಾಭವನದ ಉದ್ಘಾಟನಾ ಕಾರ್ಯಕ್ರಮದ ಬಗೆಗೆ ಮಾಹಿತಿ ನೀಡಿ ಸಂಘಟನೆ ಬಲಗೊಳ್ಳಲು ಕ್ರಿಯಾಶೀಲ ವ್ಯಕ್ತಿತ್ವ,ಮನಮುಟ್ಟುವ ಕಾರ್ಯಕ್ರಮದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಹಾಗು ಆರ್ಥಿಕತೆಯಲ್ಲಿ ಕೈಗನ್ನಡಿ ಅವಶ್ಯವೆಂದರು. ವಲಯಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಸುಬ್ರಹ್ಮಣ್ಯ ನೂರಿತ್ತಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅದೃಷ್ಟ ಸದಸ್ಯರಾಗಿ ಆಯ್ಕೆಯಾದ ಉಮೇಶ್ ಅಡಿಗರಿಗೆ ಬಹುಮಾನ ವಿತರಿಸಲಾಯಿತು. ಅನರ್ಘ್ಯ ಪ್ರಾರ್ಥಿಸಿ,ಸುಮಾ ಮಂಜಿತ್ತಾಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಗಣೇಶ್ ಭಟ್ ವಂದಿಸಿದರು.