ಬೆಳ್ತಂಗಡಿ: ಬದುಕಿನ ಎಲ್ಲ ಆಯಾಮಗಳು ಧರ್ಮದಿಂದ ಪ್ರತಿಷ್ಠಾಪಿಸಲಾಗಿದೆ. ಶ್ರದ್ಧಾಕೇಂದ್ರಗಳು ಮಾನವನ ಉನ್ನತಿಗೆ ಕಾರಣವಾಗಬೇಕು ಎಂದು ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಓಡಿಲ್ನಾಳ ಗ್ರಾಮದ ಮೈರಲ್ಕೆ ಶ್ರೀ ಶ್ರೀರಾಮನಗರ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ವೇದ ಭಗದ್ವೀತೆಗಳೇ ಸಂವಿಧಾನ, ಸಂವಿಧಾನಕ್ಕಿಂತ ಮೊದಲು ವೇದ ಸಂವಿಧಾನವಿತ್ತು. ಬದುಕು ಹೇಗೆ ಸಾಗಿಸಬೇಕೆಂದು ಋಷಿಮುನಿಗಳು ತಿಳಿಸಿದ್ದರು. ಅದರೆ ನಮ್ಮ ನಡವಳಿಕೆಯಿಂದ ನಾವಿಂದು ಎಡವಿದ್ದೇವೆ. ನಾವು ಜಾತಿ ಮತ್ತು ರಾಜಕೀಯದ ಅಂಧಕಾರದಲ್ಲಿ ಮುಳುಗಿದ್ದೇವೆ. ಆದರೆ ಆಧ್ಯಾತ್ಮಿಕ ವಿಚಾರಗಳಿಂದ ದೂರ ಉಳಿದಿದ್ದೇವೆ. ದಾರ್ಮಿಕ ಸಂಸ್ಕೃತಿ ಬೆಳೆಸಲು ಶ್ರದ್ಧಾಕೇಂದ್ರಗಳು ಜಾಗೃತವಾಗಬೇಕು ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರ ಕೃಪಾಶೀರ್ವಾದದಿಂದ ಕಿರಾತಮೂರ್ತಿ ದೇವಸ್ಥಾನ ಸ್ಥಾಪನೆ ಸುಸೂತ್ರವಾಗಿ ನೆರವೇರಿದೆ. ಆರಂಭದಿಂದ ಕೊನೆವರೆಗೆ ಶ್ರಮಿಸಿದ ಎಲ್ಲ ಸೇವಾ ಕರ್ತರನ್ನು ಸ್ಮರಿಸಿದ ಅವರು ಬ್ರಹ್ಮಕಲಶೋತ್ಸವ ಇನ್ನೇನು ಪೂರ್ಣಗೊಂಡಿದೆ, ಆದರೆ ಸಾನಿಧ್ಯ ವೃದ್ಧಿಗೆ ಭಕ್ತರ ನಿರಂತರ ಆಗಮನವಾಗಬೇಕು ಎಂದು ಹೇಳಿದರು.
ಪ್ರಸಿದ್ಧ ವಾಗ್ಮಿಗಳು ಹಾಗೂ ಚಿಂತಕರಾದ ಡಾ.ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ, ದೇವಸ್ಥಾನ ಜಾತ್ರೆ ಉತ್ಸವಗಳಲ್ಲಿ ಭಾರತೀಯತೆಯನ್ನು ಉಳಿಸಿಕೊಂಡು ದೇವಳ ನಿರ್ಮಾಣ ಮಾಡುವಷ್ಟೆ ವೈದಿಕ ಸೃಷ್ಟಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ನಂದಿಬೆಟ್ಟ ದೇವಸ್ಥಾನ ಶ್ರೀ ನಂದಿಕೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯೋಗೀಶ್ ಭಟ್ ಕಟ್ರೋಡಿ, ಮಾಲಾಡಿ ನವುಂಡ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ವಜ್ರಕುಮಾರ್ ಜೈನ್ ಮಾಲಾಡಿಗುತ್ತು, ಜಿ.ಪಂ.ಮಾಜಿ ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ., ಬೆಳ್ತಂಗಡಿ ತಾಲೂಕು ಮರಾಠಿ ಸಮಾಜ ಸೇವ ಸಂಘ ಅಧ್ಯಕ್ಷ ಉಮೇಶ್ ನಾಯ್ಕ ಕೇಲ್ದಡ್ಕ, ಕುವೆಟ್ಟು ಗ್ರಾ.ಪಂ. ಸದಸ್ಯ ನಿತೇಶ್ ಕೆ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯಿಂದ ಶಾಸಕ ಹರೀಶ್ ಪೂಂಜ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಸಮಿತಿ ಪ್ರಮುಖರನ್ನು ಗುರುತಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ.ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ಮನೋಹರ್ ಪಿ.ಸಿ. ವಂದಿಸಿದರು. ರಂಗಕಲಾವಿದ ಸ್ಮಿತೇಶ್ ಬಾರ್ಯ ನಿರೂಪಿಸಿದರು.
ಫೋಟೋ: ಓಡಿಲ್ನಾಳ ಶ್ರೀ ಕಿರಾತಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.