ಬೆಳ್ತಂಗಡಿ: ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಇಂದಿನ ಕಾಲಮಾನದಲ್ಲೂ ಪ್ರಸ್ತುತವಾಗಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಅವರು, ಶುಕ್ರವಾರ ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಆಚರಿಸಲಾದ ಶ್ರೀಕೃಷ್ಣ ಜಯಂತಿ ಸಂದರ್ಭ ಅವರು ಮಾತನಾಡಿದರು.
ನಮ್ಮ ಜೀವನ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಗೀತೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಮಾಜದ ಪರವಾಗಿ ನಿಲ್ಲಬೇಕೇ ಹೊರತು ಸ್ವಾರ್ಥ ಜೀವನ ಸಲ್ಲ. ವಸುಧೈವ ಕುಟುಂಬಕಂ ಎಂಬುದು ನಮ್ಮ ಪದ್ಧತಿಯಾಗಬೇಕು ಎಂಬ ಸಂದೇಶವನ್ನು ಕೃಷ್ಣ ಸಾರಿದ್ದಾನೆ ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರು ಶ್ರದ್ಧೆ, ಏಕಾಗ್ರತೆ ನಮ್ಮ ಎಲ್ಲಾ ಕಾರ್ಯಗಳ ಯಶಸ್ಸಿಗೆ ಪೂರಕ. ಇದನ್ನು ಶ್ರೀಕೃಷ್ಣನ ಜೀವನದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.
ಕಂದಾಯ ನಿರೀಕ್ಷಕ ಪಾವಡಪ್ಪ ಕೃಷ್ಣನ ಜೀವನಾದರ್ಶಗಳ ಬಗ್ಗೆ ಮಾತನಾಡಿದರು. ಭೂ ದಾಖಲೆಗಳ ಸಹಾಯಕ ನಿರ್ದೇಶಕ ರೇಣುಕಾ ನಾಯಕ್ ಪಟ್ಟಣ ಪಂ. ಮುಖ್ಯಾಧಿಕಾರಿ ರಾಜೇಶ್, ಕಂದಾಯ, ಸರ್ವೇ ಮತ್ತಿತರ ಇಲಾಖಾ ಸಿಬ್ಬಂದಿಗಳು ಇದ್ದರು.
ಪ್ರಥಮ ದರ್ಜೆ ಸಹಾಯಕ ಶಂಕರ ಸ್ವಾಗತಿಸಿದರು. ಹೇಮಾ ವಂದಿಸಿದರು.