ಬೆಳ್ತಂಗಡಿ: ಹಿಂದೆ ನಾವೆಲ್ಲ ಶಿಕ್ಷಣ ಪಡೆಯಬೇಕಾದರೆ ಪಠ್ಯದಲ್ಲಿ ‘ಭಗವದ್ಗೀತೆಯ ಅಧ್ಯಾ ಯವಿರಲಿಲ್ಲ. ಬದಲಾಗಿ ಮಹಮ್ಮದ್ ಗಜನಿ, ಅಕ್ಬರ್, ಜಹಾಂಗೀರ್ ಅಧ್ಯಾಯವಿತ್ತು. ಆಗ ಯಾರೂ ಮಾತು ಎತ್ತುತ್ತಿರಲಿಲ್ಲ. ನಾವು ಅಂದು ಮೂಢರಾಗಿ ವಿದ್ಯೆ ಪಡೆದಿದ್ದೇವೆ. ಇಂದಿನ ಪೋಷಕರು ಮಕ್ಕಳಿಗೆ ಐಟಿ-ಬಿಟಿ ಶಿಕ್ಷಣ ನೀಡುತ್ತಿದ್ದಾರೆ ಆದರೆ ಸಂಸ್ಕೃತಿ ವಿಚಾರಧಾರೆ ಕಲಿಸುತ್ತಿಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಓಡಿಲ್ನಾಳ ಗ್ರಾಮದ ಶ್ರೀರಾಮನಗರ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿ.೨೮ ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಉಜಿರೆ ಮಂಜುನಾಥೇಶ್ವರ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಧಾರ್ಮಿಕ ಉಪನ್ಯಾಸ ನೀಡಿದರು. ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನ ಆಡಳಿತ ಮುಕ್ತೇಸರ ಸುಕೇಶ್ ಕುಮಾರ್ ಕಡಂಬು ಅಧ್ಯಕ್ಷತೆ ವಹಿಸಿದ್ದರು.
ಎಲ್ಲಿ ಸಂಸ್ಕಾರದ ಮಹತ್ವ ತಿಳಿಯದೆ ಅದರ ಸತ್ವ ಕಳೆದುಕೊಳ್ಳುತ್ತದೆಯೋ ಅಲ್ಲಿ ಧರ್ಮದ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ ವಾಗುವುದಿಲ್ಲ. ಅದಕ್ಕೆ ಬಾಲ್ಯದಿಂದಲೇ ಸಂಸ್ಕಾರದ ಶಿಕ್ಷಣ ಒದಗಿಸಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ, ಕುವೆಟ್ಟು ಗ್ರಾ.ಪಂ. ಸದಸ್ಯ ಲಕ್ಷ್ಮಿ ಕಾಂತ್ ಮೂಡೈಲು, ಯವ ಉದ್ಯಮಿ ಶಮಂತ್ ಕುಮಾರ್ ಜೈನ್ ಕಲೆಂಜಿರೋಡಿ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ನ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಜೈನ್ ಉಪಸ್ಥಿತರಿದ್ದರು.
ತಾರನಾಥ ಕೆರಿಯೊಟ್ಟು ಸ್ವಾಗತಿಸಿದರು. ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಆಂಗ್ಲ ಭಾಷಾ ಶಿಕ್ಷಕ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಚಿದಾನಂದ ಇಡ್ಯ ವಂದಿಸಿದರು.
ಸ.ಹಿ.ಪ್ರಾ.ಶಾಲೆ ನಾಳ ಹಾಗೂ ನಾಳ ಅಂಗನವಾಡಿ ಕೇಂದ್ರ ರೇಷ್ಮೆರೋಡ್ ಮಕ್ಕಳಿಂದ ಸಾಂಸ್ಕೃತಿಕ ಕಲರವ, ಬಳಿಕ ನೃತ್ಯ ವೈಭವ ನಡೆಯಿತು.