ಬೆಳ್ತಂಗಡಿ: ಕಳಿಯ ಗ್ರಾಮದ ರೇಷ್ಮೆ ರೋಡ್ ಪರಿಸರದಲ್ಲಿ 5.5 ಕೋಟಿ ರೂ. ಅನುದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾಸಂಸ್ಥೆ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದು ಇಲ್ಲಿ ಸಮುದ್ರ ಶಿಕ್ಷಣಕ್ಕೆ ಸಂಬಂಧಪಟ್ಟ ಕೋರ್ಸ್ ಗಳ ಸಹಿತ ಇನ್ನಿತರ ಅನೇಕ ತರಬೇತಿಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಬೆಳ್ತಂಗಡಿಯ ಹುಣ್ಸೆಕಟ್ಟೆಯಲ್ಲಿ 12 ಎಕರೆ ಜಾಗದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು ಸದ್ಯವೇ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮುಂಡಾಜೆಯ ಕರಾಡ ಭವನದಲ್ಲಿ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ 33ನೇ ವರ್ಷದ ಆಚರಣೆ ಅಂಗವಾಗಿ ನಡೆದ ಚಾಲೆಂಜರ್ಸ್ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಡಾಜೆಯು ಹಲವು ಮಜಲುಗಳಿಗೆ ಪ್ರೇರಣೆ ನೀಡಿದ ಗ್ರಾಮವಾಗಿದೆ. ಇಲ್ಲಿನ ಬಹು ವರ್ಷದ ಬೇಡಿಕೆಯಾಗಿರುವ ಸೀಟು ರಸ್ತೆ ಅಭಿವೃದ್ಧಿ ಕಾಮಗಾರಿ ಡಿಸೆಂಬರ್ ಜನವರಿ ವೇಳೆಗೆ ನೆರವೇರಿಸಲಾಗುವುದು. ಮುಂದಿನ ದಿನಗಳಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ನೂತನ ಕಟ್ಟಡ ರಚನೆ ಹಾಗೂ ಸುಸಜ್ಜಿತ ಮಲ್ಟಿ ಜಿಮ್ ನಿರ್ಮಾಣಕ್ಕೆ 30 ಲಕ್ಷ ರೂ. ಅನುದಾನ ನೀಡಲಾಗುವುದು. ರಾಜ್ಯದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ನಾಲ್ಕು ಸುಸಜ್ಜಿತ ಕ್ರೀಡಾ ವಸತಿ ಶಾಲೆಗಳ ಪೈಕಿ ಒಂದು ಶಾಲೆಯು ಮುಂಡಾಜೆಯಲ್ಲಿ ನಿರ್ಮಾಣವಾಗಲಿದ್ದು ಇದಕ್ಕೆ ಈಗಾಗಲೇ ಸರಕಾರದಿಂದ ಯೋಜನೆ ಸಿದ್ಧವಾಗಿದೆ ಎಂದು ಹೇಳಿದರು.
ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ ಮುಂಡಾಜೆಯ ಭಿಡೆ, ಗುಂಡಿ ಮನೆತನ ಸೇರಿದಂತೆ ಇಲ್ಲಿನ ಅನೇಕ ಹಿರಿಯರ ಜೀವನದ ಆದರ್ಶಗಳು ಇತರರಿಗೆ ಮಾದರಿಯಾಗಿವೆ ಹಾಗೂ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿವೆ. ಪರಿಸ್ಥಿತಿಯನ್ನು ಎದುರಿಸುವಲ್ಲಿ ಬದುಕಿನ ಶಕ್ತಿ ಅಡಗಿದ್ದು ಸಕಾರಾತ್ಮಕ ಶಕ್ತಿಗಳು ಜೀವನದ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ ಗ್ರಾಮದ ಪ್ರತಿ ವ್ಯಕ್ತಿಯು ತನ್ನ ಗ್ರಾಮದ ಅಭಿವೃದ್ಧಿಯ ಪರಿಕಲ್ಪನೆ ಜತೆ ಹಳೆಯ ಚಿಂತನೆಗಳ ಲಹರಿಯಿಂದ ಹೊರಬಂದು ಬದಲಾವಣೆ ಬಗ್ಗೆ ಯೋಚಿಸಬೇಕು. ಉದ್ಯೋಗ ಹುಡುಕುವ ಬದಲು ಉದ್ಯೋಗಗಳನ್ನು ಸೃಷ್ಟಿಸುವ ಚಿಂತನೆ ಇರಬೇಕು ಎಂದು ಹೇಳಿದರು.
ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ರಫ್ ಆಲಿ ಕುಂಞ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್,ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ರವಿ, ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಶ್ರೀಧರ ಜಿ ಭಿಡೆ, ಕಾರ್ಯದರ್ಶಿ ಶಶಿಧರ ಠೋಸರ್, ನಿಯೋಜಿತ ಅಧ್ಯಕ್ಷ ಶೀನಪ್ಪ ಗೌಡ ನಿಯೋಜಿತ ಕೋಶಾಧಿಕಾರಿ ಸಾಂತಪ್ಪ ಕಲ್ಮಂಜ ಉಪಸ್ಥಿತರಿದ್ದರು.
ಸಂಚಾಲಕ ನಾಮದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಶೈಲೇಶ್ ಠೋಸರ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಿಜಯಕುಮಾರ್ ವಂದಿಸಿದರು. ವಿದುಷಿ ವಿದ್ಯಾ ಶೈಲೇಶ್ ಠೋಸರ್ ಅವರ ನಟರಾಜ ನೃತ್ಯ ಶಾಲೆಯ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
ಪ್ರಶಸ್ತಿ ಪ್ರದಾನ
ನಿವೃತ್ತ ಎಸಿಎಫ್ ಎಂ. ಎಸ್. ವರ್ಮರಿಗೆ ಜಿಎನ್ ಭಿಡೆ ಸಂಸ್ಮರಣಾ ಪ್ರಶಸ್ತಿ, ಬಂಗಾಡಿ ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡರಿಗೆ ಎನ್ ಎಸ್ ಗೋಖಲೆ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರೆಕಲ್ಲು ರಾಮಚಂದ್ರ ಭಟ್, ಸಾಮಾಜಿಕ ಕ್ಷೇತ್ರದಲ್ಲಿ ಬಾಬು ಪೂಜಾರಿ, ಕೃಷಿ ಕ್ಷೇತ್ರದಲ್ಲಿ ಸೆಬಾಸ್ಟಿಯನ್ ಅರಸು ಮಜಲು, ಆರೋಗ್ಯ ಕ್ಷೇತ್ರದಲ್ಲಿ ಡಾ.ದಿವ್ಯಲಕ್ಷ್ಮಿ, ಶಿಕ್ಷಣ ಕ್ಷೇತ್ರದಲ್ಲಿ ಜಯಂತಿ ಟಿ, ಜಾನಪದ ಕ್ಷೇತ್ರದಲ್ಲಿ ರಂಜಿನಿ ಆರ್, ಕ್ರೀಡೆಯಲ್ಲಿ ಎಸ್. ಸಿದ್ಧೀಕ್ ಉದ್ಯಮ ಕ್ಷೇತ್ರದಲ್ಲಿ ರಾಜೇಶ್ ಶೆಟ್ಟಿ ನೆಯ್ಯಾಲು ವಿಶೇಷ ಸೇವೆಗಳನ್ನು ಸಲ್ಲಿಸಿದ್ದು ಅವರಿಗೆ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಲೀಲಮ್ಮ ಕುಂಞಮೋನು ಮತ್ತು ಸೋಮನಾಥ ಅರೆಕಲ್ಲು ಅವರಿಗೆ ಸ್ವಾಭಿಮಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.