ಬೆಳ್ತಂಗಡಿ: ಮಲೆಕುಡಿಯ ಸಮುದಾಯವು ಸಂಘಟಿತರಾಗಿ ಅಭಿವೃದ್ಧಿಯೆಡೆಗೆ ಮುನ್ನಡೆಯಬೇಕು. ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವ ಜೊತೆಗೆ ಕೌಶಲವನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಇನ್ನಷ್ಟು ಪ್ರಯತ್ನಪಡಬೇಕಾಗಿದೆ ಎಂದು ಮಲೆಕುಡಿಯರ ಸಂಘದ ದ.ಕ. ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ಸಿ. ಉಜಿರೆ ಹೇಳಿದರು.
ಅವರು ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ 2022ರ ಆಗಸ್ಟ್ 28ರಂದು ನಡೆದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ದ.ಕ. ಜಿಲ್ಲಾ ಸಮಿತಿಯ ಪುನರ್ ರಚನೆಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿಯಾದ ಮಲೆಕುಡಿಯರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಧರ ಈದು ಮಾತನಾಡಿ ಸಮುದಾಯದ ಏಳಿಗೆಗಾಗಿ ಮಲೆಕುಡಿಯ ಸಮಾಜದವರೆಲ್ಲರೂ ತೊಡಗಿಕೊಳ್ಳಬೇಕಿದ್ದು, ವಿಶೇಷವಾಗಿ ಸರಕಾರಿ ಕೆಲಸದಲ್ಲಿರುವವರು, ಉದ್ಯಮಿಗಳು ಸಹಕರಿಸಬೇಕು. ಸಮುದಾಯ ಭವನ ನಿರ್ಮಾಣವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸುವ ಬಗ್ಗೆ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಲೆಕುಡಿಯರ ಸಂಘ (ರಿ.) ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಎಳನೀರು, ಉಪಾಧ್ಯಕ್ಷರಾಗಿ ಮಾಧವ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಯೇಂದ್ರ ಎಂ. ನಿಡ್ಲೆ, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮಣ ನೆರಿಯ, ಕೋಶಾಧಿಕಾರಿಯಾಗಿ ಕೃಷ್ಣಪ್ಪ ಪೂರ್ಜೆ, ಸಂಘಟನಾ ಕಾರ್ಯದರ್ಶಿಯಾಗಿ ಯುವರಾಜ್ ವೇಣೂರು, ಸಂಘದ ವಕ್ತಾರರಾಗಿ ಉಮಾನಾಥ್ ಧರ್ಮಸ್ಥಳ, ಸಮಿತಿಯ ಸದಸ್ಯರುಗಳಾಗಿ ರಾಜ್ಕಿರಣ್ ಮಂಗಳೂರು, ಕೇಶವ ಸುಳ್ಯ, ರೋಶನ್ ವೇಣೂರು, ಸೇಸಪ್ಪ ಕೊಯ್ಯೂರು, ಸುರೇಶ್ ನಾರಾವಿ, ಜನಾರ್ಧನ್ ಮಾಚಾರು, ಕೇಶವ ಬಳ್ಳಮಂಜ, ಶ್ಯಾಮಲ ನಿಡ್ಲೆ, ವಿನೋದಕುಮಾರಿ ಪುತ್ತೂರು ಇವರುಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ, ದ.ಕ. ಜಿಲ್ಲಾ ಸಮಿತಿಯ ತನಿಯಪ್ಪ ಬೆಟ್ಟಂಪಾಡಿ ಉಪಾಧ್ಯಕ್ಷ ರಾಜ್ಯ ಸಮಿತಿಯ ಕೋಶಾಧಿಕಾರಿ ಹಾಗೂ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಶಿವರಾಮ ಉಜಿರೆ, ಸುಳ್ಯ ತಾಲೂಕಿನ ಅಧ್ಯಕ್ಷರಾದ ಸುಬ್ಬಪ್ಪ ದೊಡ್ಡತೋಟ ಉಪಸ್ಥಿತರಿದ್ದರು. ಶ್ರಾವ್ಯ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ತನಿಯಪ್ಪ ಬೆಟ್ಟಂಪಾಡಿ ಸ್ವಾಗತಿಸಿ, ಬಾಲಕೃಷ್ಣ ಪೊಳಲಿ ಧನ್ಯವಾದ ಸಲ್ಲಿಸಿದರು.