ಬೆಳ್ತಂಗಡಿ: ರಾಮಾಯಣವನ್ನು ಓದಿದಷ್ಟು ಅನುಭವ ಹೆಚ್ಚಾಗುತ್ತದೆ. ಜಗತ್ತಿಗೆ ಆದರ್ಶವಾಗಿರುವ ಮಹಾಕಾವ್ಯವನ್ನು ಕೊಟ್ಟವರು ವಾಲ್ಮೀಕಿ ಅವರು. ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕುವ ಮೂಲಕ ವಾಲ್ಮೀಕಿಯ ಜಯಂತಿ ಅರ್ಥಪೂರ್ಣವಾಗಿ ಈ ವರ್ಷ ಆಚರಿಸಿದಂತಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾ.ಪಂ., ಪಂ.ಪಂ., ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅ.9 ರಂದು ಬೆಳ್ತಂಗಡಿ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವ್ಯಕ್ತಿ, ಸಮಾಜ, ಕ್ಷಣಕ್ಕೆ ಹೋಲಿಸಿದಾಗ ರಾಮಾಯಣ ಇಂದಿಗೂ ಪ್ರಸ್ತುತ. ಜಗತ್ತು ಸ್ವೀಕರಿಸಿದ ಮಹಾಕಾವ್ಯ ಯಾವುದು ಎಂದರೆ ವಾಲ್ಮೀಕಿ ರಚಿಸಿದ ರಾಮಾಯಣ. ರಾಜ್ಯದಲ್ಲಿ ಬಹಳ ವರ್ಷದ ಬೇಡಿಕೆಯಿದ್ದ ಎಸ್.ಸಿ, ಎಸ್.ಟಿ. ಸಮುದಾಯದ ಶೇ.3 ಇದ್ದ ಮೀಸಲಾತಿಯನ್ನು ಶೇ.7 ಕ್ಕೆ ಹೆಚ್ಚಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು. ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯವನ್ನು ರಚಿಸುವ ಮೂಲಕ ಸರಕಾರ ಸಮುದಾಯಕ್ಕೆ ಆಧ್ಯತೆ ನೀಡಿದೆ ಎಂದು ಹೇಳಿದರು. ಭೂ ಪರಿವರ್ತನೆಯ ಸಮಸ್ಯೆಗಳನ್ನು ಸರಕಾರವು ಕೆಲವೇ ದಿನಗಳಲ್ಲಿ ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದರು.
ಪ್ರಧಾನ ಭಾಷಣಗಾರರಾಗಿದ್ದ ಆಳ್ವಾಸ್ ಪ.ಪೂ. ಕಾಲೇಜು ಉಪನ್ಯಾಸಕ, ಲೇಖಕ, ಚಿಂತಕ ಟಿ.ಎನ್.ಖಂಡಿಗೆ ಮಾತನಾಡಿ, ಮನುಷ್ಯ ಅವಲಂಬಿಸಬೇಕಾದ ಪರಿವರ್ತನೆ, ಆದರ್ಶ ವ್ಯಕ್ತಿತ್ವ ಹಾಗೂ ಯುದ್ಧ ನಿರಾಕರಣೆಯ ಚಿತ್ರರಣವನ್ನು ಮಹರ್ಷಿಗಳು ರಾಮಾಯಣದ ಮೂಲಕ ಜೀವಂತವಾಗಿರಿಸಿದ್ದಾರೆ. ಮನುಷ್ಯ ಇದ್ದಲ್ಲೇ ಇರಬೇಕಾಗಿಲ್ಲ ಆದರ್ಶ ಪಾಲನೆ ಹಾಗೂ ಪರಿವರ್ತನೆಯಿಂದ ಬದಲಾಗಬಹುದು ಎಂದು ತಿಳಿಸಿದ್ದಾರೆ. ನಮಗೆ ಮೌಲ್ಯಗಳ ಪ್ರಜ್ಞೆ ಹೃದಯದಲ್ಲಿ ಮೂಡಬೇಕು. ಈನೆಲೆಯಲ್ಲಿ ನಾವೆಲ್ಲ ವಾಲ್ಮೀಕಿ ಪುಸ್ತಕಗಳನ್ನು ಓದಿ, ಸಮಾಜದ ಉದ್ಧಾರಕ್ಕೆ ಕಾರಣವಾಗಬೇಕು ಎಂದು ಹೇಳಿದರು.
ಪ.ಪಂ. ಅಧ್ಯಕ್ಷೆ ರಜನಿಕುಡ್ವ, ರಾ.ಹ.ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಪೃಥ್ವಿ ಸಾನಿಕಮ್, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ಜಿ.ಪಂ. ಮಾಜಿ ಸದಸ್ಯ ಕೊರಗಪ್ಪ ನಾಯ್ಕ್, ಬಿಜೆಪಿ ಎಸ್.ಟಿ.ಮೋರ್ಚ ಅಧ್ಯಕ್ಷ ಚೆನ್ನಕೇಶವ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ್, ತಾ.ಪಂ. ವ್ಯವಸ್ಥಾಪಕ ಪ್ರಶಾಂತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿದ್ದು ಅತೀ ಹೆಚ್ಚು ಅಂಕ ಪಡೆದ ಪ.ಪಂಗಡದ ಎಸೆಸೆಲ್ಸಿ, ಪಿಯುಸಿಯ 12 ವಿದ್ಯಾರ್ಥಿಗಳು, ಮೂಲ ನಿವಾಸಿ ಕೊರಗ ಸಮುದಾಯದ ಎಸೆಸೆಲ್ಸಿ ಹಾಗೂ ಏಳನೇ ತರಗತಿಯಲ್ಲಿ ಉತ್ತೀರ್ಣರಾದ 8 ಮಕ್ಕಳಿಗೆ, ತಾಲೂಕಿನ ಬೇರೆ ಬೇರೆ ಶಾಲೆಗಳಲ್ಲಿ ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 12 ಮಂದಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 11 ಮಂದಿ ಪ.ಪಂ. ಒಟ್ಟು 40 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಸ್ವಾಗತಿಸಿದರು. ಹೇಮಲತಾ ನಿರೂಪಿಸಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಕೇಸರಿ ವಂದಿಸಿದರು. ವಾಣಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.