ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರ ಹಿತ ದೃಷ್ಟಿಯಿಂದ ಬೃಹತ್ ನೀರಾವರಿ ಇಲಾಖೆಯ ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದ ವತಿಯಿಂದ ತಾಲೂಕಿನಲ್ಲಿ 50 ಬೋರ್ ವೆಲ್ ಅಳವಡಿಸುವ ಮೂಲಕ ಕೃಷಿ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕಣಿಯೂರು ಗ್ರಾಮದ ಬರಂಬು ದೇವಕಿ ಗುರುವಪ್ಪ ನಾಯಕ್ ಅವರ ಮನೆಯಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಯೋಜನೆಯಲ್ಲಿ ಫಲಾನುಭವಿ ಕೃಷಿಕನ ಕೃಷಿ ನೀರಾವರಿ ವ್ಯವಸ್ಥೆಗೆ 5 ಲಕ್ಷ ರೂ. ವೆಚ್ಚದಲ್ಲಿ ಬೋರ್ ವೆಲ್, ಪಂಪ್, ವಿದ್ಯುತ್ ಸಂಪರ್ಕ, ಪೈಪ್ ಲೈನ್, ಸ್ಪ್ರಿಂಕ್ಲರ್ ಗಳನ್ನು ಅಳವಡಿಸಲಾಗುವುದು. ಫಲಾನುಭವಿ ಕನಿಷ್ಠ ಒಂದು ಎಕರೆ ಜಾಗವನ್ನು ಹೊಂದಿರಬೇಕು. ಮುಂದಿನ ಹಂತದಲ್ಲಿ 80 ಫಲಾನುಭವಿಗಳಿಗೆ ಈ ಯೋಜನೆಯ ಅನುಕೂಲ ನೀಡಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ ರೈತರಿಗೆ ಸಹಕಾರ ನೀಡುವ ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಹಲವಾರು ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಕೃಷಿ ಕುಟುಂಬಗಳ ಕನಸು ನನಸಾಗಿದೆ ಎಂದು ಹೇಳಿದರು.
ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸುಮಜಲ್,ಪದ್ಮುಂಜ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕರ,ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ್ ಉರುವಾಲು, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಹೋಗೀಶ್ ಪೂಜಾರಿ ಕಡ್ತಿಲ, ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕ ರಾಘವ ಕಲ್ಮಂಜ, ತಾ.ಪಂ. ಮಾಜಿ ಸದಸ್ಯೆ ಅಮಿತಾ ಕುಶಾಲಪ್ಪ ಗೌಡ, ಕಣಿಯೂರು ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ಜಲಜಾಕ್ಷಿ, ಸದಸ್ಯರಾದ ಯಶೋಧರ ಶೆಟ್ಟಿ, ಸೇಸಪ್ಪ ಮೂಲ್ಯ, ಮೋಹಿನಿ, ಪ್ರವೀಣ, ಪ್ರಿಯಾಂಕಾ, ಗುತ್ತಿಗೆದಾರ ಕೃಷ್ಣರಾಜ್ ಭಟ್ ಉಪಸ್ಥಿತರಿದ್ದರು.