ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್.ಕೆ.ಡಿ.ಆರ್.ಡಿ.ಪಿ.) ಇದರ 2021-22 ರ ಸಾಲಿಗೆ ಸರಕಾರಕ್ಕೆ ಸಲ್ಲಿಸಿರುವ ವಾಣಿಜ್ಯಕರ ನಿರ್ವಹಣೆಯಲ್ಲಿ ತೋರಿಸಿರುವ ಗುಣಮಟ್ಟಕ್ಕಾಗಿ ಕೇಂದ್ರ ಸರಕಾರ, ಹಣಕಾಸು ಇಲಾಖೆಯ ಜಿ.ಎಸ್.ಟಿ. ಅಧ್ಯಕ್ಷರಿಂದ ಪ್ರಶಂಸಾ ಪತ್ರವು ಲಭ್ಯವಾಗಿದೆ.
ಈ ಪ್ರಮಾಣ ಪತ್ರದಲ್ಲಿ ಯೋಜನೆಯು 2021-22 ರ ಸಾಲಿನಲ್ಲಿ ಪ್ರಾಮಾಣಿಕವಾಗಿ ಜಿ.ಎಸ್.ಟಿ. ಪಾವತಿ ಮಾಡಿದ್ದಲ್ಲದೆ, ಸಮಯಕ್ಕೆ ಸರಿಯಾಗಿ ರಿಟರ್ನ್ಗಳನ್ನು ಸಲ್ಲಿಸಿರುವುದರಿಂದ ದೇಶದ 1.2 ಕೋಟಿ ಜಿಎಸ್ಟಿ ನೋಂದಾವಣೆದಾರರ ಪೈಕಿ 50,000 ಅತ್ಯುತ್ತಮ ವಾಣಿಜ್ಯ ಸಂಸ್ಥೆಗಳಲ್ಲೊಂದು ಎಂದು ಜಿ.ಎಸ್.ಟಿ. ವಿಭಾಗದ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಜಿ.ಎಸ್.ಟಿ. ಪಾವತಿಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವ 4,606 ಸಂಸ್ಥೆಗಳ ಪೈಕಿ ಯೋಜನೆಯನ್ನೂ ಗುರುತಿಸಲಾಗಿದೆ.
ಈ ಕುರಿತಂತೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿರುವ ಸಂಸ್ಥೆಯ ಅಧ್ಯಕ್ಷ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಯೋಜನೆಯ ಶಿಸ್ತುಬದ್ಧ ವ್ಯವಹಾರ ಮತ್ತು ಪಾರದರ್ಶಕತೆಗೆ ಹಿಡಿದ ಕನ್ನಡಿಯಾಗಿದೆಯೆಂದು ಪ್ರಶಂಸಾ ಪತ್ರವನ್ನು ಬಣ್ಣಿಸಿದ್ದಾರೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಪೈ ಮತ್ತು ಹಣಕಾಸು ನಿರ್ದೇಶಕ ರಾಜೇಶ್ ಮತ್ತು ಅವರ ತಂಡವನ್ನು ಅವರು ಅಭಿನಂದಿಸಿದ್ದಾರೆ.