ಬೆಳ್ತಂಗಡಿ, ಡಿ.26: ವಿಶ್ವಕ್ಕೆ ಶಾಂತಿಯ ಸಂದೇಶ ಕೊಟ್ಟವರು ಯೇಸು ಸ್ವಾಮಿ. ಕ್ರೈಸ್ತರು ಶಾಂತಿ ಪ್ರಿಯರು. ವಿಶ್ವ ಒಗ್ಗಟ್ಟಾಗಿ ಬಾಳಲು ಶಾಂತಿ ಅತ್ಯವಶ್ಯಕವಾಗಿದೆ ಎಂದು ಮೂಡುಬಿದ್ರೆ ಮಹಾವೀರ ಕಾಲೇಜು ಪ್ರಾಂಶುಪಾಲ ಡಾ| ರಾಧಾಕೃಷ್ಣ ಶೆಟ್ಟಿ ಹೇಳಿದರು.
ಅಂತರ್ ಧರ್ಮೀಯ ಆಯೋಗ ಬೆಳ್ತಂಗಡಿ ವಲಯ ಆಶ್ರಯದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್, ಐ.ಸಿ.ವೈ.ಎಂ. ಮಡಂತ್ಯಾರು ಘಟಕ ಸಹಯೋಗದೊಂದಿಗೆ ಸೇಕ್ರೆಡ್ ಹಾರ್ಟ್ ಸಭಾಂಗಣದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀನಿವಾಸ್ ಯುನಿವರ್ಸಿಟಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ| ನಿಯಾಜ್ ಪಿ. ಮಾತನಾಡಿ, ಇಸ್ಲಾಂ ಧರ್ಮ ಸಹೋದರತೆಯ ಸಂಕೇತ. ಎಲ್ಲ ಧರ್ಮಗಿಂತಲೂ ರಾಷ್ಟ್ರಧರ್ಮವೆ ಮೇಲು. ಜಾತಿ ಮತ ಪಕ್ಷ ಬೇದ ಭಾವ ಮರೆತು ಒಂದಾಗೋಣ ಎಂದು ಕರೆ ನೀಡಿದರು.
ನೈನಾಡು ಚರ್ಚ್ ಪ್ರಧಾನ ಧರ್ಮಗುರು ಡಾ| ರಾಕಿ ಫೆರ್ನಾಂಡಿಸ್ ಮಾತನಾಡಿ, ತಮ್ಮದೇ ಆದ ಧರ್ಮವನ್ನು ಭಕ್ತಿಯಲ್ಲಿ ಪ್ರತಿಪಾದಿಸಿಕೊಂಡು ಇತರ ಯಾವುದೇ ಜಾತಿ ಧರ್ಮವನ್ನು ಗೌರವಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಬೆಳ್ತಂಗಡಿ ವಲಯ ವಿಕರ್ವಾರ್ ಫಾ| ಸ್ವಾಮಿ ಜೋಸೆಫ್ ಕಾರ್ಡೋಜ ಕಾರ್ಯಕ್ರಮ ಉದ್ಘಾಟಿಸಿದರು. ಸೇಕ್ರೆಡ್ ಹಾರ್ಟ್ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾ| ಸ್ವಾಮಿ ಬೇಸಿಲ್ ವಾಸ್ ಅಧ್ಯಕ್ಷತೆ ವಹಿಸಿದ್ದರು.
ಮಡಂತ್ಯಾರು ಆಶಾ ದೀಪ ಸುಪೀರಿಯರ್ ಫಾ| ಜೋಸೆಫ್ ಡಿಸೋಜಾ, ಸೇಕ್ರೆಡ್ ಹಾರ್ಟ್ ಚರ್ಚ್ ಸಹಾಯಕ ಧರ್ಮಗುರು ಫಾ| ವಿಲಿಯಮ್ ಡಿಸೋಜ, ಸೇಕ್ರೆಡ್ ಹಾರ್ಡ್ ಪ.ಪೂ. ಕಾಲೇಜು ಪ್ರಾಂಶುಪಾಲ ಫಾ| ಜೆರೊಮ್ ಡಿಸೋಜಾ, ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಫಾ| ದೀಪಕ್ ಡೇಸಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಜೆರಾಲ್ಡ್ ಮೋರಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಿಯೋ ರೊಡ್ರಿಗಸ್ ಸ್ವಾಗತಿಸಿದರು, ಜೆರಾಲ್ಡ್ ಮೊರಸ್ ವಂದಿಸಿದರು. ವಿವೇಕ್ ವಿ. ಪೈಸ್ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಮಡಂತ್ಯಾರು ಪೇಟೆಯಿಂದ ಕ್ರಿಸ್ ಮಸ್ ಸಾಂತಕ್ಲೋಸ್ ಮೆರವಣಿಗೆ ನಡೆಯಿತು. ಕ್ರಿಸ್ ಮಸ್ ಸಾಂಸ್ಕೃತಿಕ ಸಂಜೆ ಮತ್ತು ಪಂಡ ಕೇನುಜೆರ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.