ಬೆಳ್ತಂಗಡಿ: ಸಾರ್ವಜನಿಕವಾಗಿ ಹೀಯಾಳಿಸಿ, ನಿಂದಿಸಿ ಪತ್ರಕರ್ತರ ಆತ್ಮವಿಶ್ವಾಸವನ್ನು ಕುಂದಿಸುವ ಕಾರ್ಯನಡೆಯುತ್ತಿದ್ದರೂ ಯಾರೂ ಧೃತಿಗೆಡಬಾರದು. ನಿಮ್ಮೊಂದಿಗೆ ನಾನಿದ್ದೇನೆ ಎಂದು ಶಾಸಕ ಹರೀಶ ಪೂಂಜ ಭರವಸೆ ನೀಡಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೆಗಳು ಸಮಾಜಕ್ಕೆ ಪೂರಕ. ಅವುಗಳು ದಾರಿತಪ್ಪಬಾರದು. ಅದರಂತೆ ಪತ್ರಿಕೆಗಳಿಗೆ ಕಾರ್ಯನಿರ್ವಹಿಸುವ ಪತ್ರಕರ್ತರ ರಕ್ಷಣೆಯೂ ಮುಖ್ಯ. ಯಾರಾದರು ದುರಹಂಕಾರದ ಮಾತುಗಳನ್ನಾಡಿದರೆ ನಿಮ್ಮ ರಕ್ಷಣೆಗೆ ನಾನಿದ್ದೇನೆ ಎಂದರು.
ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಪ್ರಾಮಾಣಿಕ ಕಾಳಜಿಯ ಕೆಲಸ ಮಾಡುವ ಪತ್ರಕರ್ತರಿಗೆ ಸರಕಾರಗಳು ಜೀವನ ಭದ್ರತೆ ಕಲ್ಪಿಸುವ ಅಗತ್ಯ ಇದೆ. ಈ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯಲಾಗುವುದು. ಸ್ವಾತಂತ್ರ್ಯ ಸಂಗ್ರಾಮದ ಸಮಯವೂ ಭಾರತೀಯರನ್ನು ಒಗ್ಗೂಡಿಸಲು ಪತ್ರಿಕೆಗಳು ಉತ್ತಮ ಕೆಲಸ ಮಾಡಿದ್ದವು.ಆಧುನಿಕ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಸಾಕಷ್ಟು ಪೈಪೋಟಿ ನಡೆಸುವ ಸ್ಥಿತಿ ಇದೆ ಎಂದರು.
ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಮಾತನಾಡಿ “ಪತ್ರಿಕಾರಂಗದಲ್ಲಿ ಬೆಳವಣಿಗೆಯಾಗಿದ್ದು ಅಭೂತ ಪೂರ್ವ ಬದಲಾವಣೆ ಉಂಟಾಗಿದೆ. ಇಂದು ಓದುವವರ ಸಂಖ್ಯೆ ಕಡಿಮೆಯಾಗಿದೆ.ಗ್ರಂಥಾಲಯಗಳತ್ತ ಜನ ತೆರಳುತ್ತಿಲ್ಲ. ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಪೋಷಕರು ಮೂಡಿಸಬೇಕು. ಪತ್ರಿಕೆ,ಪುಸ್ತಕ ಓದುವುದರಿಂದ ಜ್ಞಾನ ತನ್ನಿಂದ ತಾನೇ ಅಧಿಕಗೊಳ್ಳುತ್ತದೆ. ಭವಿಷ್ಯದ ಬಗ್ಗೆ ಯೋಚಿಸಿ ಬರಹಗಾರರು ಮುಂದುವರಿಯ ಬೇಕು. ಇನ್ನೊಬ್ಬರ ತೇಜೋವಧೆ, ವೈಯಕ್ತಿಕ ನಿಂದನೆ ಪತ್ರಕರ್ತರಿಗೆ ಶೋಭೆಯಲ್ಲ”ಎಂದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಜೋಸೆಫ್ ಎನ್.ಎಂ. ಅವರು ತಾಲೂಕಿನ ಜಲಸಂವರ್ಧನೆಗೆ ಪತ್ರಕರ್ತರ ಸಹಕಾರವನ್ನು ಕೋರಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಜಿ., ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ ವಹಿಸಿದ್ದರು. 70 ತುಂಬಿದ ಪ.ರಾ.ಶಾಸ್ತ್ರಿ ಯವರನ್ನು ಅಭಿನಂದಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪೆರ್ಲ ಬೈಪಾಡಿ ಪ್ರೌಢಶಾಲಾ ವಿದ್ಯಾರ್ಥಿನಿ ಸುರಕ್ಷಿತಾ (613) ಕಾಯರ್ತಡ್ಕ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಶರಣ್ಯಾ (609) ಮತ್ತು ಎನ್. ಹಿತಾ (609) ಇವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯ ಮನೋಹರ ಬಳಂಜ ನೀಡುತ್ತಾ ಬರುತ್ತಿರುವ ಧೃತಿ ದತ್ತಿನಿಧಿಯನ್ನು 6ಮಂದಿ ಅನಾರೋಗ್ಯ ಪೀಡಿತರಿಗೆ ಹಸ್ತಾಂತರ ಮಾಡಲಾಯಿತು. ಕಾರ್ಯದರ್ಶಿ ಪ್ರಸಾದ್ ಏಣಿಂಜೆ ಸ್ವಾಗತಿಸಿದರು. ಹಿರಿಯ ಸದಸ್ಯ ಆರ್. ಎನ್. ಪೂವಣಿ ಸಂದೇಶ ವಾಚಿಸಿದರು.ಗಣೇಶ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.ತುಕಾರಾಂ ಬಿ.ವಂದಿಸಿದರು.