ಬೆಳ್ತಂಗಡಿ: ಸರಕಾರದ ಯೋಜನೆಗಳು ಜನರಿಗೆ ಪಾರದರ್ಶಕವಾಗಿ ಸಿಗಬೇಕು ಎಂಬ ಕಲ್ಪನೆಯಿಂದ ಜನರ ಬಳಿ ಆಡಳಿತ ಸೇವೆ ಎಂಬ ಹೊಸ ಕಲ್ಪನೆಯಂತೆ ತಾಲೂಕಿನಲ್ಲಿ ಅನುಷ್ಠಾನ ಮಾಡುತ್ತಿದ್ದು ಇದರ ಪ್ರಾರಂಭಿಕವಾಗಿ ರಾಜ್ಯದಲ್ಲೇ ಪ್ರಪ್ರಥಮಬಾರಿಗೆ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಮಾಡಲಾಗುತ್ತಿದ್ದು ನ. ೨೨ರಂದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಇದುವರೆಗೆ ಒಟ್ಟು ೩೨ ಸಾವಿರ ಅರ್ಜಿಗಳು ಬಂದಿದ್ದು ಇದರಲ್ಲಿ ಕುಮ್ಕಿ ಜಮೀನು ಅರ್ಜಿಗಳನ್ನು ಹೊರತುಪಡಿಸಿ ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿದವರ ಅರ್ಜಿಯನ್ನು ಪರಿಗಣಿಸಲಾಗುತ್ತಿದ್ದು ಈಗಾಗಲೇ ಗ್ರಾಮ ಕರಣಿಕರು ಕಂದಾಯ ಅಧಿಕಾರಿಗಳು ಅರ್ಜಿಗಳ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಆಯ್ಕೆಗೊಂಡ ಅರ್ಜಿಗಳ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸಲಾಗುತ್ತಿದ್ದು ಇಂತಹ ಫಲಾನುಭವಿಗಳು ನಿಗದಿ ಪಡಿಸಿದ ಅರ್ಜಿ ವಿಲೇವಾರಿ ದಿನಾಂಕದ ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿ ಅಕ್ರಮ ಸಕ್ರಮ ಸಮಿತಿಯ ಮುಂದೆ ಹಾಜರಾಗಬೇಕು ಅಲ್ಲೇ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದರು.
ಭೃಷ್ಟಾಚಾರಕ್ಕೆ ಅವಕಾಶವಿಲ್ಲ. ಲಂಚ ನೀಡಬೇಡಿ, ಲಂಚ ಕೇಳಿದರೆ ಮಾಹಿತಿ ಕೊಡಿ.
ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ಮತ್ತು ೯೪ಸಿ ಮತ್ತು ೯೪ಸಿಸಿ ಇದು ಸರಕಾರವು ರೈತರಿಗೆ ಮತ್ತು ನಿವೇಶನ ರಹಿತರಿಗೆ ನೀಡುವ ಸೌಲಭ್ಯವಾಗಿದೆ. ಇದನ್ನು ಪಡೆಯಲು ಯಾವುದೇ ಅಧಿಕಾರಿಗಳಿಗೆ ಲಂಚ ನೀಡಬೇಡಿ, ಅಧಿಕಾರಿಗಳಿಗೆ ಸರಕಾರವು ವೇತನ ನೀಡುತ್ತದೆ. ಅಧಿಕಾರಿಗಳು ಲಂಚ ಕೇಳಿದರೆ ನನ್ನ ಅಥವಾ ತಾಹಶೀಲ್ದಾರ್ರವರ ಗಮನಕ್ಕೆ ತರಬೇಕು, ತಕ್ಷಣ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಇದು ವರೆಗೆ ಯಾರಾದರೂ ಲಂಚ ಪಡೆದಿದ್ದರೆ ಅವರ ಮಾಹಿತಿಯನ್ನು ನೀಡಿದರೆ ಆ ಹಣವನ್ನು ಮರುಪಾವತಿಸಲು ಕ್ರಮ ಕಯಗೊಳ್ಳಲಾಗುವುದು. ತಾಲೂಕಿನಲ್ಲಿ ಭೃಷ್ಠಾಚಾರಕ್ಕೆ ಅವಕಾಶ ನೀಡುವುದಿಲ್ಲ. ಜನರು ಕೂಡಾ ಲಂಚ ಕೊಡದೆ ಭೃಷ್ಠಾಚಾರ ತಡೆಗೆ ಸಹಕರಿಸಬೇಕು ಎಂದರು.
ಶೀಘ್ರದಲ್ಲೇ ರೈತರಿಗೆ ಕುಮ್ಕಿ ಹಕ್ಕು ವಿತರಣೆಗೆ ಕ್ರಮ
ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿಗಳು ಮತ್ತು ಸಂಬಂಧ ಪಟ್ಟ ಸಚಿವರುಗಳು ಕುಮ್ಕಿಹಕ್ಕು ನೀಡಲು ಇವರು ಅಡ್ಡಿಯನ್ನು ನಿವಾರಿಸಲು ಕೇಂದ್ರದ ಗಮನಕ್ಕೆ ತಂದಿದ್ದು ಇದಕ್ಕೆ ಸ್ಪಂದನೆಯೂ ಸಿಕ್ಕಿರುತ್ತದೆ. ತಾಂತ್ರಿಕ ಅಡೆತಡೆಗಳು ಶೀಘ್ರ ನಿವಾರಣೆಯಾಗಲಿದ್ದು ಒಂದೆರಡು ತಿಂಗಳಿನಲ್ಲಿ ಸರಕಾರವು ಅಲ್ಪ ದರ ನಿಗದಿಯನ್ನು ಮಾಡಿ ೧೦ ಎಕ್ರೆ ಒಳಗಿನ ಕುಮ್ಕಿ ಜಮೀನನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಅಕ್ರಮ ಸಕ್ರಮದ ಅಡಿಯಲ್ಲಿ ಕುಮ್ಕಿ ಜಮೀನಿಗೆ ಅರ್ಜಿ ಸಲ್ಲಿಸಿದರೆ ಅದರಲ್ಲಿ ಸಿಗಲಿಲ್ಲ ಎಂಬ ಆತಂಕ ರೈತರಲ್ಲಿ ಬರಬಾರದು. ಸರಕಾರವು ರೈತರ ಜೊತೆ ಸದಾ ಇರುತ್ತದೆ ಎಂದರು.
ಡಿಸೆಂಬರ್ ಒಳಗೆ ೯೪ಸಿ ೯೪ಸಿಸಿ ಅರ್ಜಿ ವಿಲೇವಾರಿ
ತಾಲೂಕಿನಲ್ಲಿ ೨೯೦೦ ೯೪ಸಿ, ೯೪ಸಿಸಿ ಅರ್ಜಿ ವಿಲೇವಾರಿಯಾಗಿದ್ದು ಇದರಲ್ಲಿ ಬಹುತೇಕ ಅರ್ಜಿಗಳು ಅರಣ್ಯ ಸಂಬಂಧಿಸಿದಂತೆ ತಕರಾರಿನಿಂದ ಬಾಕಿ ಉಳಿದಿದೆ. ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಗರಿಷ್ಠ ಮಟ್ಟದಲ್ಲಿ ನಿವೇಶನ ರಹಿತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಡಿಸೆಂಬರ್ ಒಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಅಕ್ರಮ ಸಕ್ರಮ ವಿಲೇವಾರಿ ದಿನಾಂಕ ವಿವರ ನ.೨೨ರಂದು ಬೆಳಿಗ್ಗೆ ೧೦.೩೦ಕ್ಕೆ ನಾರಾವಿ ಗ್ರಾ. ಪಂ. ಆವರಣದಲ್ಲಿ, ೧೨.೩೦ ಅಡಿಂಜೆ ಗ್ರಾ. ಪಂ., ೩.೩೦ ಆರಂಬೋಡಿ ಗ್ರಾ. ಪಂ, ನ.೨೩ರಂದು ಬೆಳಿಗ್ಗೆ ೧೦.೩೦ಕ್ಕೆ ಶಿಬಾಜೆ ಗ್ರಾ. ಪಂ., ೧೨.೩೦ಕ್ಕೆ ಶಿಶಿಲ ಗ್ರಾ. ಪಂ., ೩.೩೦ಕ್ಕೆ ಅರಸಿನಮಕ್ಕಿ ಗ್ರಾ. ಪಂ. ಆವರಣದಲ್ಲಿ, ನ೨೪ಕ್ಕೆ ಬೆಳಿಗ್ಗೆ ೧೦.೦೦ಕ್ಕೆ ಮಲವಂತಿಗೆ ಗ್ರಾ. ಪಂ. ೧೨.೩೦ಕ್ಕೆ ಕಡಿರುದ್ಯಾವರ ಗ್ರಾ. ಪಂ., ೩.೩೦ಕ್ಕೆ ನಾವೂರು ಗ್ರಾ. ಪಂ. ಆವರಣದಲ್ಲಿ, ನ.೨೫ಕ್ಕೆ ಬೆಳಿಗ್ಗೆ ೧೦.೦೦ಕ್ಕೆ ಬಂದಾರು ಗ್ರಾ. ಪಂ., ೧೨.೩೦ಕ್ಕೆ ಕಣಿಯೂರು ಗ್ರಾ. ಪಂ., ೩.೩೦ಕ್ಕೆ ಬಾರ್ಯ ಗ್ರಾ. ಪಂ., ನ೨೯ಕ್ಕೆ ಬೆಳಿಗ್ಗೆ ೧೦.೩೦ಕ್ಕೆ ಶಿರ್ಲಾಲು ಗ್ರಾ. ಪಂ., ೧೨.೩೦ಕ್ಕೆ ಅಳದಂಗಡಿ ಗ್ರಾ. ಪಂ., ನ ೩೦ಕ್ಕೆ ಬೆಳಿಗ್ಗೆ ೧೦.೩೦ಕ್ಕೆ ಮುಂಡಾಜೆ ಗ್ರಾ. ಪಂ., ೧೨.೩೦ಕ್ಕೆ ನೆರಿಯ ಗ್ರಾ. ಪಂ., ೩.೩೦ಕ್ಕೆ ಕಲ್ಮಂಜ ಗ್ರಾ. ಪಂನಲ್ಲಿ. ಡಿ.೦೧ರಂದು ಬೆಳಿಗ್ಗೆ ೧೦.೩೦ಕ್ಕೆ ಮಚ್ಚಿನ ಗ್ರಾ. ಪಂ. ೧೨.೩೦ಕ್ಕೆ ಮಾಲಾಡಿ ಗ್ರಾ. ಪಂ., ೩.೩೦ಕ್ಕೆ ಕಳಿಯ ಗ್ರಾ. ಪಂ. ಆವರಣದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು ಮತ್ತೆ ೧೫ ದಿನಗಳ ನಂತರ ೨ನೇ ಹಂತದಲ್ಲಿ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.