ಬೆಳ್ತಂಗಡಿ, ಡಿ.23: ಸುಧಾರಿತ ಯಂತ್ರೋಪಕರಣ ಬಂದರೂ ಹವಮಾನ ವೈಪರಿತ್ಯದಿಂದಾಗಿ ಕೃಷಿಕ ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ಹಳ್ಳಿ ಬೆಳೆದು ಸ್ವಾವಲಂಬನೆಯಾದರೆ ಹಳ್ಳಿಯಿಂದ ಪೇಟೆಗೆ ವಲಸೆ ಹೋಗುವ ಪ್ರವೃತ್ತಿ ತಪ್ಪುತ್ತದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ ಕಳವಳ ವ್ಯಕ್ತಪಡಿಸಿದರು.
ಆತ್ಮ ಯೋಜನೆ ಕೃಷಿ ಇಲಾಖೆ, ತಾಲೂಕು ಕೃಷಿ ಸಮಾಜ ಹಾಗೂ ಜಿಲ್ಲಾ ಕೃಷಿಕ ಸಮಾಜ ಜಂಟಿ ಆಶ್ರಯದಲ್ಲಿ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ರೈತನ ಮಗನೂ ಶಿಕ್ಷಿತನಾಗುತ್ತಾನೆ. ಎಲ್ಲ ಸರಕಾರಗಳು ರೈತ ಯೋಗ್ಯ ಯೋಜನೆ ನೀಡುತ್ತಾ ಬಂದಿದೆ. ಆದರೆ ಇದು ಯಾವುದೂ ಸಾಲುತ್ತಿಲ್ಲ. ರೈತನೂ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂದು ಆಶಿಸಿದರು.
ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಪೃಥ್ವಿ ಸಾನಿಕಮ್, ತಾ.ಕೃ.ಸ. ಉಪಾಧ್ಯಕ್ಷೆ ಸುರೇಖಾ ಭಂಡಾರಿ, ಪಶುಸಂಗೋಪನ ಇಲಾಖೆ ಸಹಾಯಕ ಉಪನಿರ್ದೇಶಕ ಮಂಜ ನಾಯ್ಕ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕೆ.ಎಸ್., ಜಿಲ್ಲಾ ಕೃ.ಸ. ಪ್ರತಿನಿಧಿ ರಾಜು ಪೂಜಾರಿ, ತಾಂತ್ರಿಕ ಅಧಿಕಾರಿ ಹುಮೇರಾ ಜಬಿನ್ ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಟಿ.ಎಂ. ಸ್ವಾಗತಿಸಿದರು. ಕೃಷಿ ಇಲಾಖೆಯ ಚಿದಾನಂದ ಹೂಗಾರ್ ನಿರೂಪಿಸಿದರು. ಮುನಿರಾಜ್ ಅಜ್ರಿ ವಂದಿಸಿದರು.
ಪ್ರಗತಿ ಪರ ರೈತರಾದ ಮೂಡಿಗೆರೆಯ ಚಂದ್ರಶೇಖರ್ ಮತ್ತು ಮೊಗ್ರು ಗ್ರಾಮದ ದೇವಿಪ್ರಸಾದ್ ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಕೃಷಿ ಇಲಾಖೆಯಲ್ಲಿ ನಿವೃತ್ತರಾದ ಪ್ರ.ದ.ಸಹಾಯಕಿ ಪ್ರಮೀಳಾ ಎಂ.ಆರ್.ಅವರನ್ನು ಸಮ್ಮಾನಿಸಲಾಯಿತು.
2021-22 ನೇ ಸಾಲಿನ ಆತ್ಮ ಯೋಜನೆಯಡಿ ಸಮಗ್ರ ಕೃಷಿಕ ಘಟಕದಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದವರನ್ನು ಸಮ್ಮಾನಿಸಲಾಯಿತು. 2021-22 ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಡಿ ಪ್ರಥಮ ಪ್ರಶಸ್ತಿ ಪಡೆದ ಧರ್ಮರಾಜ್, ದ್ವಿತೀಯ ಪ್ರಶಸ್ತಿ ಪಡೆದ ಕೃಷ್ಣಪ್ಪ ಗೌಡ, ತೃತೀಯ ಸ್ಥಾನ ಪಡೆದ ರಂಜಿತ್ ಹಾಗೂ ಪ್ರಗತಿ ಪರ ರೈತರಾದ ದೇವಿಪ್ರಸಾದ್, ಚಂದ್ರಶೇಖರ್, ಕೃಷ್ಣ ಭಟ್, ನವೀನ್ ನಾಯ್ಕ್ ಅವರನ್ನು ಗೌರವಿಸಲಾಯಿತು.