ಬೆಳ್ತಂಗಡಿ: ಗಾಂಧೀಜಿಯವರು ಕಂಡಿದ್ದ ಸ್ವಚ್ಛ ಭಾರತ ಕನಸನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಾಕಾರಗೊಳಿಸುತ್ತಾ ಬಂದಿದ್ದಾರೆ. ದೇಶದಲ್ಲಿ ಸ್ವಚ್ಛತೆಯೆಡೆಗೆ ಪರಿವರ್ತನೆ ಕಂಡಿರುವುದು ಹರ್ಷದಾಯಕ. ಮಕ್ಕಳು ಭವಿಷ್ಯದ ಬುನಾದಿಯಾಗಿದ್ದು ಅವರಲ್ಲಿರುವ ಸೃಜನಾತ್ಮಕ ಶಕ್ತಿಯನ್ನು ಹೊರತೆಗೆಯುವ ಕೆಲಸ ಇಂದು ಬೆಳ್ತಂಗಡಿ ಪ.ಪಂ. ಮಾಡಿರುವುದು ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಡಿ.೫ರಂದು ಪ.ಪಂ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತಿಯಿಂದ ಡೇ-ನಲ್ಮ್ ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರಿಗೆ ಮಾರಾಟ ಪ್ರಮಾಣ ಪತ್ರ, ಡಾ| ಬಿ.ಆಂಬೇಡ್ಕರ್ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಕಾಮಗಾರಿ ಆದೇಶ ಪತ್ರ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪಟ್ಟಣದ ೨೧ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ೨೦ ಮಂದಿ ಎಸ್.ಎಸ್.ಟಿ. ಫಲಾನುಭವಿಗಳಿಗೆ ಡಾ| ಬಿ.ಆಂಬೇಡ್ಕರ್ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಕಾಮಗಾರಿ ಆದೇಶ ಪತ್ರ ವಿತರಿಸುವ ಕೆಲಸವಾಗಿದೆ. ಕಲ್ಲಗುಡ್ಡೆಯಲ್ಲಿ ನಿವೇಶನ ಹಂಚುವ ಕೆಲಸ ಒಂದು ವಾರದಲ್ಲಿ ನಡೆಯಲಿದ್ದು, ಭವಿಷ್ಯದ ಆಧಾರ ಸೂರಿನ ನಿರ್ಮಾಣದ ಕನಸು ಈಡೇರಿಸಲಾಗುವುದು ಎಂದು ಹೇಳಿದರು.
ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ. ಮಾತನಾಡಿ, ಸ್ವಚ್ಛ ಸರ್ವೇಕ್ಷಣ ಯೋಜನೆಯಡಿ ಪಟ್ಟಣ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಿಗೆ ನಿರುಪಯುಕ್ತ ವಸ್ತುಗಳಿಂದ ಆಟಿಕ ಸಾಮಾನು ತಯಾರಿಸುವ ಸ್ಪರ್ಧೆ ಏರ್ಪಡಿಸಿ ಸ್ವಚ್ಛತೆಯ ಜಾಗೃತಿ ಮೂಡಿಸಲಾಗಿದೆ. ಪ.ಪಂ. ವ್ಯಾಪ್ತಿಯಲ್ಲಿ ಫಲಾನಭವಿಗಳನ್ನು ಆಯ್ಕೆಮಾಡಿ ವಾಜಪೇಯಿ ನಗರ ವಸತಿ ಯೋಜನೆಯಡಿ ೧.೨೦ ಲಕ್ಷ ರೂ. ಅನುದಾನ ಸಿಗಲಿದ್ದು, ಡಾ|ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ೨ ಲಕ್ಷ ರೂ. ಅನುದಾನ ಲಭ್ಯವಾಗಿದೆ ಎಂದು ತಿಳಿಸಿದರು.
ವಿಜೇತ ವಿದ್ಯಾರ್ಥಿಗಳು ಕಾಲೇಜು ವಿಭಾಗ
ಪ್ರಥಮ: ಬೆಳ್ತಂಗಡಿ ಸರಕಾರಿ ಪಿಯು ಕಾಲೇಜು ಕಾವ್ಯಾ ಎಂ.ಡಿ., ಲಿಖಿತಾ. ದ್ವಿತೀಯ: ವಾಣಿ ಕಾಲೇಜಿನ ಅಮೃತಾ, ಕೀರ್ತನಾ. ಪ್ರೌಢ ಶಾಲೆ ವಿಭಾಗ: ಪ್ರಥಮ: ಹೋಲಿ ರೆಡಿಮರ್ ಆ.ಮಾ.ಶಾಲೆ ವಿನಿಶಾ ಡಿಸೋಜ, ಸ್ಟೀಡಲ್ ವಾಸ್. ದ್ವಿತೀಯ: ವಾಣಿ ಆ.ಮಾ.ಶಾಲೆಯ ಅಭಿಜ್ಞಾ ಎಸ್.ಶೆಟ್ಟಿ, ಶ್ರುತಿ ಎಸ್.. ತೃತೀಯ: ಎಸ್.ಡಿ.ಎಂ. ಆ.ಮಾ.ಶಾಲೆಯ ಸುಭಿಕ್ಷಾ ಬಿ., ಅತೀಶ್ರಾಯ.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಸದಸ್ಯರಾದ ಡಿ.ಜಗದೀಶ್, ತುಳಸಿ, ಅಂರೀಶ್, ಶರತ್, ಗೌರಿ, ನಾಮನಿರ್ದೇಶಿತ ಸದಸ್ಯರಾದ ಕೇಶವ, ಲಲಿತಾ ಉಪಸ್ಥಿತರಿದ್ದರು.
ಪ.ಪಂ. ಸಿಬಂದಿ ಮೆಟಿಲ್ಡಾ ಹಾಗೂ ಸಚಿನ್ ಕಾರ್ಯಕ್ರಮ ನಿರೂಪಿಸಿದರು.