ಬೆಳ್ತಂಗಡಿ: ನ.ಪಂ ಸಾಮಾನ್ಯ ಸಭೆಯು ನ.ಪಂ ಅಧ್ಯಕ್ಷೆ ರಜನಿ ಕುಡ್ವ ಅಧ್ಯಕ್ಷತೆಯಲ್ಲಿ ನ.ಪಂ ಸಭಾಂಗಣದಲ್ಲಿ ಗುರುವಾರ ನಡೆಯಿತು.
ನಗರ ವ್ಯಾಪ್ತಿಯಲ್ಲಿ ಸ್ವಉದ್ಯೋಗ ಮಾಡಲು ಪ್ರಧಾನಿಯವರ ಕಲ್ಪನೆಯಂತೆ ಕೆಲವು ಕಡೆ ಗೂಡಂಗಡಿ ಮಾಡಲು ಅವಕಾಶ ನೀಡಿದ್ದು ಅವರು ಬಾಡಿಗೆ ಪಂಚಾಯತ್ಗೆ ಪಾವತಿಸದ ಕಾರಣ ಮುಂದಿನ ದಿನಗಳಲ್ಲಿ ದಿನಕ್ಕೆ ೮೦ರೂ. ನಂತೆ ಬಾಡಿಗೆ ನಿಗದಿ ಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಂತೆ ಮಾರುಕಟ್ಟೆಯೊಳಗೆ ಕುರಿ ಮೇಯಿಸುವುದು ಮತ್ತು ಕುರಿಗಳನ್ನು ಕಡಿಯುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು. ಇದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಕುರಿ ಕಡಿಯಲು ಯಾವುದೇ ಪರವಾನಿಗೆ ಇರುವುದಿಲ್ಲ. ಮಾಂಸ ತಂದು ಮಾರಾಟ ಮಾಡಲು ಮಾತ್ರ ಅವಕಾಶವಿದೆ ಎಂದು ಒತ್ತಾಯಿಸಿದರು. ಇದಕ್ಕೆ ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಮನೆ ಮನೆಗಳಿಂದ ಹಸಿ ಕಸ , ಒಣಕಸ ಪ್ರತ್ಯೇಕವಾಗಿ ಸಂಗ್ರಹಿಸಲು ಬಕೇಟ್ಗಳನ್ನು ತಂದು ಕೆಲವು ತಿಂಗಳುಗಳಾದರೂ ವಿತರಿಸಲು ಕ್ರಮ ಕೈಗೊಳ್ಳಲಿಲ್ಲ ಎಂದು ಸದಸ್ಯ ಜಗದೀಶ್ ಆರೋಪಿಸಿದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಉತ್ತರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಇದಕ್ಕೆ ಅಗತ್ಯವಿರುವ ತಾತ್ಕಾಲಿಕ ಕೂಲಿ ಕಾರ್ಮಿಕರನ್ನು ನೇಮಿಸಿ ಸೆ.೧೦ರೊಳಗೆ ಎಲ್ಲಾ ಬಕೇಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾರ್ಕಳದಲ್ಲಿ ಮಹಾಯೋಜನೆ ಜಾರಿಯಾಗುವ ತನಕ ಸ್ಥಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ವಿನ್ಯಾಸ ನಕ್ಷೆ ಮತ್ತು ಫಾರ್ಮ ನಂ.೩ ಕೊಡಲು ಸರಕಾರ ಆದೇಶಿಸಿದೆ. ಈ ಬಗ್ಗೆ ಬೆಳ್ತಂಗಡಿ ಪ.ಪಂನಲ್ಲೂ ನಿರ್ಣಯ ಮಾಡಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂದು ಸದಸ್ಯ ಜಗದೀಶ್ ಒತ್ತಾಯಿಸಿದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಗೌಡ ಉತ್ತರಿಸಿ ಈ ಬಗ್ಗೆ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಸಂಬಂದಪಟ್ಟ ಸಚಿವರಲ್ಲಿ ಮಾತುಕತೆ ನಡೆಸಿದ್ದಾರೆ. ಶೀಘ್ರ ಇಲ್ಲಿಗೂ ವಿನ್ಯಾಸ ನಕ್ಷೆ ಮತ್ತು ಫಾರ್ಮ ನಂ.೩ ನೀಡುವ ಅವಕಾಶ ಸಿಗುವ ಭರವಸೆ ಇದೆ ಎಂದರು.
ಸಂತೆ ಮಾರುಕಟ್ಟೆಯೊಳಗೆ ನಗರೋತ್ಥಾನ ಮೂರನೇ ಹಂತದ ಅನುದಾನದಲ್ಲಿ ನಿರ್ಮಿಸಲಾದ ೧೦ಸ್ಟಾಲ್ಗಳ ಪೈಕಿ ೬,೭,೮,೯ನ್ನು ಈಗಾಗಲೇ ನಾಲ್ಕು ಬಾರಿ ಹರಾಜಿಗೆ ಕರೆದಿದ್ದು ಆದರೆ ಠೇವಣಿ ಹೆಚ್ಚಾದ ಕಾರಣ ಯಾರೂ ಸ್ಟಾಲ್ನ್ನು ಪಡೆಯಲು ಮುಂದೆ ಬರುತ್ತಿಲ್ಲ ಈ ಬಗ್ಗೆ ಠೇವಣಿ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ ಸರಕಾರದ ಕೆಲವೊಂದು ನಿಯಮಗಳಂತೆ ಠೇವಣಿಯನ್ನು ಇಡಲಾಗಿದೆ. ಸದಸ್ಯರ ಅಭಿಪ್ರಾಯ ಹಾಗೂ ಖಾಸಗಿ ಕಟ್ಟಡಗಳ ಠೇವಣಿಯ ಬಗ್ಗೆ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಉತ್ತರಿಸಿ ಮಾಹಿತಿಯನ್ನು ಪಡೆದುಕೊಂಡು ಖುದ್ದಾಗಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡುವ ಎಂದರು.
ಉದಯ ನಗರದ ಬಳಿ ಕಿರು ಸೇತುವೆಯು ಕುಸಿಯುವ ಹಂತದಲ್ಲಿದ್ದು ಎರಡು ವರ್ಷಗಳಿಂದ ಇಲ್ಲಿ ಹೊಸ ಕಿರುಸೇತುವೆ ನಿರ್ಮಿಸಬೇಕು ಎಂದು ಪ್ರಸ್ತಾಪ ಸಲ್ಲಿಸಲಾಗಿದೆ ಈ ಬಗ್ಗೆ ಸಾರ್ವಜನಿಕರು ಕೂಡ ಆಕ್ರೊಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಸದಸ್ಯ ಜಗದೀಶ್ ತಿಳಿಸಿದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಗೌಡ ಉತ್ತರಿಸಿ ಈಗಾಗಲೇ ಶಾಸಕರ ವಿಶೇಷ ಪ್ರಯತ್ನದಿಂದ ೫ಕೋಟಿ ರೂ. ಮಂಜೂರಾಗಿದ್ದು ಇದರಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲು ಸರಕಾರ ತಿಳಿಸಿದ್ದು ಈ ಅನುದಾನದಲ್ಲಿ ಶೀಘ್ರ ಕಿರುಸೇತುವೆ ನಿರ್ಮಿಸಲಾಗುವುದು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ಇಂಜಿನಿಯರ್ಗೆ ಸೂಚಿಸಿದರು.
ಸಂತೆ ಮಾರುಕಟ್ಟೆಯೊಳಗೆ ಹಸಿಮೀನು ಹಾಗೂ ಕೋಳಿ ಮಾಂಸ ಮಾರಾಟ ಮಳಿಗೆಗಳ ಮಲೀನ ನೀರು ಸಂಗ್ರಹಿಸಲು ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ೫ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಲು ಸಭೆ ಅನುಮೋದಿಸಿತು.
ಕಲ್ಲಗುಡ್ಡೆ ವ್ಯಾಪ್ತಿಯಲ್ಲಿ ೨೦೧೭-೧೮ರಲ್ಲಿ ೭೨ಸೈಟ್ಗಳನ್ನು ಗುರುತಿಸಲಾಗಿದ್ದು ಇದರಲ್ಲಿ ೫೨ಸೈಟ್ಗಳು ಮಂಜೂರಾಗಿದ್ದವು. ಆ.೧೫ರಂದು ಇದರ ಹಕ್ಕುಪತ್ರ ನೀಡುವುದೆಂದು ಘೋಷಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರ ಫಲಾನುಭವಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸದಸ್ಯ ಜಗದೀಶ್ ಆರೋಪಿಸಿದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಉತ್ತರಿಸಿ ಇಲ್ಲಿ ಇರುವಂತಹ ಸೈಟ್ ಅಷ್ಟೊಂದು ಸುರಕ್ಷಿತವಾಗಿಲ್ಲ ಎಲ್ಲಾ ಸದಸ್ಯರು ನಾಳೆಯೇ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮತ್ತೆ ಈ ಬಗ್ಗೆ ಕ್ರಮ ಕೈಗೊಳ್ಳುವ ಎಂದುಉಪಾಧ್ಯಕ್ಷ ಜಯಾನಂದ್ ತಿಳಿಸಿದರು.
ಹಸಿಕಸದಿಂದ ಗೊಬ್ಬರ ತಯಾರಿ
ನಗರ ವ್ಯಾಪ್ತಿಯ ಹಸಿ ಕಸದಿಂದ ಗೊಬ್ಬರ ತಯಾರಿಸಲಾಗಿದ್ದು ಪ್ರಾಯೋಗಿಕವಾಗಿ ಇದು ಯಶಸ್ವಿಯಾಗಿದೆ. ಗೊಬ್ಬರ ಕೆ.ಜಿಗೆ ೧೫ರೂ.ವಿನಂತೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ರಾಜೇಶ್ ತಿಳಿಸಿದರು. ಅನೇಕ ವರ್ಷಗಳ ಬೇಡಿಕೆಯನ್ನು ಹೊಸ ಮುಖ್ಯಾಧಿಕಾರಿ ರಾಜೇಶ್ರವರು ಅನುಷ್ಠಾನಗೊಳಿಸಿದ್ದು ಮುಖ್ಯಾಧಿಕಾರಿಗಳ ಈ ಸಾಧನೆಯನ್ನು ಎಲ್ಲಾ ಸದಸ್ಯರು ಅಭಿನಂದಿಸಿದರು.
ಪ್ರಥಮ ಗೊಬ್ಬರವನ್ನು ಅಧ್ಯಕ್ಷೆ ರಜನಿ ಕುಡ್ವ ಖರೀದಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಸಭೆಯಲ್ಲಿ ಜುಲೈ ತಿಂಗಳ ಸಮೆ, ಖರ್ಚುಗಳನ್ನು ಪರಿಶೀಲಿಸಲಾಯಿತು. ವಿವಿಧ ಕಾಮಗಾರಿಗಳ ಟೆಂಡರ್ ಕೊಟೇಶನ್ಗಳನ್ನು ಅಂಗೀಕರಿಸಲಾಯಿತು. ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಜಯಾನಂದ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಇಂಜಿನಿಯರ್ ಮಹಾವೀರ ಅರಿಗ, ಮತ್ತು ಸದಸ್ಯರು ಭಾಗವಹಿಸಿದ್ದರು.