ಬೆಳ್ತಂಗಡಿ: ಪೋಷಕರ ಕೈಯಿಂದ ತಪ್ಪಿಸಿಕೊಂಡಿದ್ದ ಮಗುವನ್ನು ಮರಳಿ ಪೋಷಕರ ಮಡಿಲಿಗೆ ಸೇರಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಚಿಲ್ಲೂರು ಬಡ್ನಿಯ ನಿರ್ಮಲಾ ಹಾಗೂ ಮಂಜಪ್ಪ ಹಡಪದ ದಂಪತಿಯ ಆರು ವರ್ಷದ ಮಗಳು ಏ.23ರಂದು ಧರ್ಮಸ್ಥಳದಲ್ಲಿ ಪೋಷಕರಿಂದ ತಪ್ಪಿಸಿಕೊಂಡಿದ್ದಳು.
ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಕೂಲಿ ಕೆಲಸ ಮಾಡುತ್ತಿರುವ ಈ ದಂಪತಿಗೆ ಒಟ್ಟು ಮೂರು ಮಕ್ಕಳಿದ್ದು ಸಣ್ಣ ಮಗುವಿನ ಆರೈಕೆ ವೇಳೆ ನಯನಾ ಪೋಷಕರಿಂದ ತಪ್ಪಿಸಿಕೊಂಡಿದ್ದಳು. ಹೀಗೆ ತಪ್ಪಿಸಿಕೊಂಡು ಅಳುತ್ತಾ ಅಲೆದಾಡುತ್ತಿದ್ದ ನಯನಾಳನ್ನು ಗಮನಿಸಿದ ಸಾರ್ವಜನಿಕರು ಧರ್ಮಸ್ಥಳದ ಮಾಹಿತಿ ಕಚೇರಿಗೆ ತಲುಪಿಸಿ ಅಲ್ಲಿಂದ ಧರ್ಮಸ್ಥಳದ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಿಸಲಾಗಿತ್ತು.
ಇಲ್ಲಿನ ಪರಿಚಯ ಇಲ್ಲದ ಹಾಗೂ ಹೆಚ್ಚಿನ ಅಕ್ಷರಸ್ಥರಲ್ಲದ ಪೋಷಕರು ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದಲ್ಲಿ ಮಗುವನ್ನು ಬಿಟ್ಟುಹೋದ ಪೋಷಕರು ಎಂಬ ವದಂತಿಯು ಹಬ್ಬಿತ್ತು.ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಅನಿಲ್ ಕುಮಾರ್ ಹಾಗೂ ತಂಡದವರು ನಯನಾಳಿಂದ ಸಿಕ್ಕ ಅಸ್ಪಷ್ಟ ಮಾಹಿತಿ ಆಧಾರದಲ್ಲಿ ಪೋಷಕರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು ಮಗುವನ್ನು ಪೋಷಕರಿಗೆ ಮರಳಿಸುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ.