ಬೆಳ್ತಂಗಡಿ: “ಬಿಜೆಪಿಯ ಆಡಳಿತ ಇರುವ ಎಲ್ಲಾ ಕಡೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಉಂಟಾಗಿದೆ. ಈ ಅಭಿವೃದ್ಧಿ ಇನ್ನಷ್ಟು ಹೊಸ ರೂಪ ಪಡೆಯಲು ಹಾಗೂ ಇನ್ನಷ್ಟು ಯೋಜನೆಗಳು ಜನರನ್ನು ತಲುಪಲು ಇನ್ನೊಮ್ಮೆ ಬಿಜೆಪಿ ಸರಕಾರ ಆಡಳಿತಕ್ಕೆ ಬರುವ ಅಗತ್ಯವಿದೆ” ಎಂದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಜರಗಿದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
“ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಸ್ಪಷ್ಟತೆ ಇಲ್ಲದ ಕೆಲವು ಕಾಂಗ್ರೆಸ್ ನಾಯಕರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಣೆ ಮಾಡುತ್ತಿರುವುದು ತೀರಾ ಹಾಸ್ಯಸ್ಪದ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಗರಿಗೆದರುವ ಅಪಪ್ರಚಾರ,ಜಾತಿ ರಾಜಕೀಯಗಳ ಕಡೆ ಗಮನಹರಿಸದೆ ಕಾರ್ಯಕರ್ತರು ಒಗ್ಗಟ್ಟು ಹಾಗೂ ಹೊಂದಾಣಿಕೆಯಿಂದ ಮುಂದುವರಿಯಬೇಕು” ಎಂದು ತಿಳಿಸಿದರು.
‘ಚುನಾವಣೆಗೆ ಮೊದಲು ಕೊಟ್ಟ ಭರವಸೆಗಳನ್ನು ಶಾಸಕ ಹರೀಶ್ ಪೂಂಜ ನೆರವೇರಿಸುತ್ತಿದ್ದಾರೆ. ನವ ಬೆಳ್ತಂಗಡಿ ನಿರ್ಮಾಣದ ಅವರ ಕನಸು ಹಲವು ಯೋಜನೆಗಳ ಮೂಲಕ ಸಾಕಾರ ಗೊಳ್ಳುತ್ತಿದೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತವು ಜನ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸವಿದೆ” ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, “ಕಳೆದ 4 ವರ್ಷಗಳ ಆಡಳಿತದಿಂದ ಉತ್ತೇಜನ ಹೊಂದಿರುವ ಇತರ ಪಕ್ಷಗಳ ಅನೇಕ ಮುಖಂಡರು ಪದಾಧಿಕಾರಿಗಳು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಬೆಳ್ತಂಗಡಿಯ ಅಭಿವೃದ್ಧಿಗೆ ಪ್ರೇರಣೆ ಸಚಿವ ಸುನಿಲ್ ಕುಮಾರ್. ಇದುವರೆಗೆ ಸುಮಾರು 3,000 ಕೋಟಿ ರೂ. ಅನುದಾನದಿಂದ ಅನೇಕ ಯೋಜನೆಗಳನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ವಿವಿಧ ಇಲಾಖೆಗಳ ಮೂಲಕ ಹೆಚ್ಚಿನ ಪ್ರಯೋಜನವನ್ನು ನೀಡಲಾಗಿದೆ” ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಸ್ತುವಾರಿ ಹರಿಕೃಷ್ಣ ಬಂಟ್ವಾಳ ಮಾತನಾಡಿ “ಮೋದಿ ಸರಕಾರ ನೀತಿ ವಾದದ ರಾಜಕೀಯದ ಮೂಲಕ ದೇಶವನ್ನು ಮುನ್ನಡೆಸುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಜನಪರ ಸರಕಾರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಹೇಳಿದರು.
ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪ್ರಭಾಕರ್ ಬಂಗೇರ,ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸುಮಜಲು,ಅಲ್ಪ ಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಜೋಯಲ್ ಮೆಂಡೋನ್ಸಾ, ನಪಂ ಅಧ್ಯಕ್ಷ ರಜನಿ ಕೂಡ,ಉಪಾಧ್ಯಕ್ಷ ಜಯಾನಂದ ಗೌಡ,ಧನಲಕ್ಷ್ಮಿ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಂಡಲ ಉಪಾಧ್ಯಕ್ಷ ಸೀತಾರಾಮ್ ಬೆಳಾಲು ವಂದಿಸಿದರು.
ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ
ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡರಾಗಿದ್ದ ಚಂದನ್ ಪ್ರಸಾದ್ ಕಾಮತ್,ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಮುಂಡಾಜೆ ಗ್ರಾ.ಪಂ ಮಾಜಿ ಸದಸ್ಯೆ ಅಶ್ವಿನಿ ಎ. ಹೆಬ್ಬಾರ್, ವೇಣೂರಿನ ಸತೀಶ್ ಮಡಿವಾಳ, ಧರ್ಮಸ್ಥಳ ಗ್ರಾ.ಪಂ ಸದಸ್ಯೆ ಗಾಯತ್ರಿ, ಕುಕ್ಕಳದ ರಾಜೇಶ್ವರಿ, ಮಾಲಾಡಿ ಗ್ರಾ.ಪಂ ಸದಸ್ಯ ಪುನೀತ್ ಕುಮಾರ್, ಸಹಕಾರಿ ಧುರೀಣ ಪುಷ್ಪರಾಜ ಜೈನ್, ಕನ್ಯಾಡಿ ಶಾಲಾಭಿವೃದ್ಧಿ ಅಧ್ಯಕ್ಷ ನಂದ ಭಟ್, ಸತೀಶ್ ರಾವ್ ನಿಡ್ಲೆ, ಮಹೇಶ್ ಜೈನ್ ಧರ್ಮಸ್ಥಳ, ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಆಂಟೊನಿ ಕಲ್ಲೇರಿ, ಬಿಎಸ್ ಎಫ್ ಮಾಜಿ ಯೋಧ ಸೆಬಾಸ್ಟಿಯನ್, ಆರಂಬೋಡಿ ಗ್ರಾ.ಪಂ ಮಾಜಿ ಸದಸ್ಯ ಆನಂದ ಶೆಟ್ಟಿ, ಕಾಶಿಬೆಟ್ಟು ಶನೈಶ್ಚರ ದೇವಸ್ಥಾನದ ಮೊಕ್ತೇಸರ ಜನಾರ್ದನ ಆಚಾರ್ಯ, ಕುಕ್ಕಳದ ವಿಠಲ, ಮೊಗ್ರು ಗ್ರಾಮದ ಕೇಶವ, ಕಲ್ಮಂಜ ಗುತ್ತು ಮನೆಯ ಸುಂದರಿ, ಮೊದಲಾದ ನಾಯಕರು ಹಾಗೂ ಹಲವಾರು ಮಂದಿ ಅಭಿಮಾನಿಗಳು ಬಿಜೆಪಿಗೆ ಸೇರ್ಪಡೆಗೊಂಡರು.