ಮೈಸೂರು: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೋದಿ ಯುಗ ಉತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶನಿವಾರ ಚಾಲನೆ ನೀಡಿದರು.
ಒಂಬತ್ತು ದಿನಗಳ ಕಾಲ ನಗರದ ವಿದ್ಯಾರಣ್ಯಪುರಂ ನ ರಾಮಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿರುವ ಉದ್ಯಾನವನದಲ್ಲಿ “ತಾಯಿಯ ಗರ್ಭದಿಂದ ಭೂ ಗರ್ಭದವರಗೆ” ಎಂಬ ಶೀಷಿಕೆಯೊಂದಿಗೆ ಮೋದಿ ಯುಗ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಯೋಜನೆ ಮಾಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಕುರಿತು ಜನ ಜಾಗೃತಿ ಸಮಾರಂಭವನ್ನು ನಡೆಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದೊಂದೂ ವಿಶೇಷ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮವು ಸೆ.25ರವರೆಗೆ ನಡೆಯಲಿದೆ.
ಗಿಡ ನೆಡುವ ಮೂಲಕ, ವಿವಿಧ ಯೋಜನೆಗಳ ನೋಂದಣಿಗಾಗಿ ಮಾಡಲಾಗಿರುವ ಸ್ಟಾಲ್ ಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಮಾಜಿ ಸಿಎಂ ಎಸ್. ಎಂ.ಕೃಷ್ಣ ರವರು ಶಾಸಕ ರಾಮದಾಸ್ ಅವರ ಕಾರ್ಯವನ್ನು ಶ್ಲಾಘಿಸಿದರಲ್ಲದೆ ಅವರ ಮೇಲಿನ ವಿಶೇಷ ಅಭಿಮಾನದಿಂದ ಮೋದಿ ಯುಗ ಉತ್ಸವಕ್ಕೆ ಆಗಮಿಸಿರುವುದಾಗಿ ತಿಳಿಸಿದರು.
ನರೇಂದ್ರ ಮೋದಿಯಂತ ನಾಯಕರು ನಮ್ಮ ದೇಶದಲ್ಲಿ ಆಗೋಮ್ಮೆ ಈಗೊಮ್ಮ ಹುಟ್ಟುತ್ತಾರೆ. ಮೋದಿಯವರ ಹಲವಾರು ಚಿಂತನೆ ದೂರ ದೃಷ್ಟಿವುಳ್ಳ ಹೆಮ್ಮೆಯ ನಾಯಕ, ಇವರೊಬ್ಬ ಯುಗ ಪುರುಷ, ಅವರುಆಚಾರ ವಿಚಾರಗಳಲ್ಲಿ ಒಬ್ಬ ತಪಸ್ವಿಯಾಗಿದ್ದಾರೆ. ಇಂಥ ಒಬ್ಬ ನಾಯಕ ನಮ್ಮ ದೇಶದ ಪ್ರಧಾನಿ ಆಗಿರೋದು ನಮ್ಮೆಲ್ಲರ ಪುಣ್ಯ. ವಿಶ್ವದಲ್ಲೇ ಅತ್ಯಂತ ಪ್ರಧಾನವಾಗಿ ಎದ್ದು ಕಾಣುವ ವ್ಯಕ್ತಿತ್ವ ಮೋದಿ ಅವರದು ಎಂದು ಹೇಳಿದರು.
ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ, ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿ ತಾಯಿ ಗರ್ಭದಿಂದ ಭೂಗರ್ಭದವರಗೆ ಶ್ರೀರ್ಷಿಕೆ ಅಡಿ ಗರ್ಭಿಣಿ ತಾಯಂದಿರಿಗೆ ನಿರಂತರ ಪೌಷ್ಟಿಕಾಂಶಯುಕ್ತ ಆಹಾರ ನೀಡಿ ಶಿಶು, ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಡುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ವಿಶೇಷವಾದ ರೀತಿಯಲ್ಲಿ ಆಚರಣೆ ಮಾಡೋಣ ಎಂದು ಹೇಳಿದರು.
ಇದಕ್ಕೂ ಮುನ್ನ ಅವರನ್ನು ಪೂರ್ಣಕುಂಬದ ಸ್ವಾಗತ ನೀಡಿ ತೆರೆದ ಜೀಪಿನಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಪ್ರಧಾನಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಅಖಿಲ ಭಾರತೀಯ ತೆರಾಪಂತ್ ಯುವಕರ ಪರಿಷತ್ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ರಕ್ತದಾನ ಮಾಡಿದಂತಹ ಯುವಕ-ಯುವತಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ಎಂ. ಶಿವಕುಮಾರ್, ಸಂಸದರಾದ ಪ್ರತಾಪ್ ಸಿಂಹ, ಉಪ ಮೇಯರ್, ಡಾ. ಜಿ. ರೂಪ, ನಟಿ, ಕು. ರೂಪಿಕ, ಬಿ.ಜೆ.ಪಿ. ನಗರಾಧ್ಯಕ್ಷ ಶ್ರೀವತ್ಸ, ಕೆ.ಆರ್. ಅಧ್ಯಕ್ಷ ವಡಿವೇಲು, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಓಂ ಶ್ರೀನಿವಾಸ್, ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ರಾಮಪ್ರಸಾದ್, ಗೀತಾಶ್ರೀ ಯೋಗನಂದ್, ಚಂಪಕ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಸೌಮ್ಯ ಉಮೇಶ್, ಕಾಡಾ ಮಾಜಿ ಅಧ್ಯಕ್ಷ ಶಿವಲಿಂಗಯ್ಯ, ಪಕ್ಷದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿ ವೃಂದದವರು ಹಾಗೂ ಫಲಾನುಭವಿಗಳು ಹಾಜರಿದ್ದರು.