ಬೆಳ್ತಂಗಡಿ: ಸುಮಾರು ಒಂದೂ ಮುಕ್ಕಾಲು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವೇಣೂರು ಹೋಬಳಿಯ ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವರ ಪ್ರತಿಷ್ಠೆ ಡಿ. ೨೬ ರಂದು ನಡೆದು ಡಿ. ೨೯ ರಂದು ಸಂಭ್ರಮದ ಬ್ರಹ್ಮಕಲಶೋತ್ಸವದೊಂದಿಗೆ ಸಂಪನ್ನಗೊಂಡಿತು. ನಡ್ವಂತಾಡಿ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಹಾಗೂ ಡಿ. ಚಂದ್ರಶೇಖರ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಗಳು ಅಚ್ಚುಕಟ್ಟಾಗಿ ನೆರವೇರಿದವು.
ಬ್ರಹ್ಮಕಲಶೋತ್ಸವದ ದಿನ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ನಡೆದ ನವೀಕರಣ ಕಾಮಗಾರಿಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಇಲ್ಲಿನ ದೇವಸ್ಥಾನದ ನಿರ್ಮಾಣದಲ್ಲಿ ಶ್ರಮದಾನದ ಮೂಲಕ ಆದ ಕೆಲಸವೇ ಅತಿ ಹೆಚ್ಚು ಇರುವುದನ್ನು ತಿಳಿದು ಆನಂದವಾಯಿತು.ಇದೊಂದು ದೇವಸ್ಥಾನದ ಅಭಿವೃದ್ಧಿ ಕಾರ್ಯದ ಮೂಲಕ ಸಿಗುವ ಸಂಸ್ಕಾರವೇ ಆಗಿದೆ. ಸಣ್ಣ ಸಣ್ಣ ಕೆಲಸ ಕಾರ್ಯಗಳಿಂದ ಭಗವಂತ ತೃಪ್ತಿ ಹೊಂದುತ್ತಾನೆ. ಗ್ರಾಮಸ್ಥರ ಛಲ ಹಾಗೂ ಹಟದಿಂದ ಸಾಧನೆಯಾಗಿದೆಯಲ್ಲದೆ ಗುರಿಯನ್ನು ತಲುಪಿರುವುದು ದೇವಸ್ಥಾನ ನೋಡಿದರೆ ಅರಿವಾಗುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಪರಿವರ್ತನೆಗಳಾಗಿವೆ. ಶೈಕ್ಷಣಿಕ ಸಾಧನೆಯಾಗಿದೆ. ಜನತೆ ಪ್ರಗತಿಪರರಾಗಿದ್ದಾರೆ. ಪರರಾಜ್ಯಕ್ಕೆ ಹೋಗಿ ಕಷ್ಟ ಪಡಬೇಕಾದ ಕಾಲ ಈಗಿಲ್ಲ. ಜಾಗರೂಕ, ಪ್ರಜ್ಞಾವಂತ ನಾಗರಿಕರು ಹುಟ್ಟಿಕೊಂಡಿದ್ದಾರೆ. ನಲ್ವತ್ತು ವರ್ಷಗಳ ಹಿಂದೆ ದೇವಸ್ಥಾನಗಳ ಜಾತ್ರೆ ಇತ್ಯಾದಿಗಳಿಗೆ ಹೋದರೆ ಅಲ್ಲಿ ಬೀಡಿ ಸಿಗರೇಟುಗಳ ಹೊಗೆ, ಹೆಂಡದಂಗಡಿ, ಇಸ್ಪೀಟು ಆಡುವ ಜನರೇ ಕಾಣಸಿಗುತ್ತಿದ್ದರಲ್ಲದೆ, ಶುಚಿತ್ವವೇ ಇಲ್ಲವಾಗಿತ್ತು. ಆದರೆ ಈಗ ಅವೆಲ್ಲಾ ಚಟಗಳು ಮಾಯವಾಗಿ ಅಗಾಧ ಪರಿವರ್ತನೆ ಆಗಿದೆ. ದೇಲಂಪುರಿ ದೇವಸ್ಥಾನದ ಸುತ್ತಲಿನ ಸ್ವಚ್ಛತೆಯನ್ನು ನೋಡಿದರೆ ಇದು ಗೊತ್ತಾಗುತ್ತದೆ ಎಂದು ಹೆಗ್ಗಡೆ ವಿವರಿಸಿದರು.
ಧರ್ಮಸ್ಥಳ ಯೋಜನೆಯ ಮೂಲಕ ರಾಜ್ಯದಲ್ಲಿ ೧೦,೦೦೦ ಕಾಮನ್ ಸರ್ವಿಸ್ ಸೆಂಟರ್ ಆರಂಭಿಸಿದ ಪರಿಣಾಮ ಒಂದು ಕೋಟಿ ೨೦ ಲಕ್ಷ ಮಂದಿ ಹೊಸದಾಗಿ ಖಾತೆಯನ್ನು ತೆರೆದಿದ್ದಾರೆ. ೫೪ ಲಕ್ಷ ಮಂದಿ ಆಯುಷ್ಮಾನ್ ಭಾರತ ನೋಂದಣಿ ಮಾಡಿಸಿದ್ದಾರೆ. ೫೦ ಲಕ್ಷ ಜನ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂದವರು ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ ಅವರು ದೇಲಂಪುರಿ ಸುತ್ತಲಿನ ಗ್ರಾಮದ ತಾಯಂದಿರ ಶಕ್ತಿ, ಯುವಕರ ಹುಮ್ಮಸ್ಸು ಇಲ್ಲಿನ ಬ್ರಹ್ಮಕಲಶೋತ್ಸವದಲ್ಲಿ ಮೇಳೈಸಿದೆ. ಸ್ವಚ್ಛತೆಯು ಮಾದರಿಯಾಗಿದೆ. ಮಡಲು ಹೆಣೆಯುವ ಕಲೆಯನ್ನು ಸುಮಾರು ೫೦ ಮಂದಿ ಹೆಂಗಳೆಯವರು ಹೊಸದಾಗಿ ಕರಗತ ಮಾಡಿಕೊಂಡಿದ್ದಾರೆ ಎಂದು ಶ್ಲಾಘಿಸಿದ ಅವರು ಎಲ್ಲಾ ಸಮಿತಿ, ಉಪಸಮಿತಿಗಳ ಸದಸ್ಯರನ್ನು ಅಭಿನಂದಿಸಿದರು.
ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ, ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಬಂಧಕ ಮಹಾಲಿಂಗೇಶ್ವರ ಕೆ., ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಕೀರ್ತಿರಾಜ ಅಜ್ರಿ ಉಪಸ್ಥಿತರಿದ್ದರು. ಮಾಡಾವು ವೆಂಕಟರಮಣ ಜೋಯಿಸ, ತೀರ್ಥಮಂಟಪದ ದಾನಿ ಸದಾನಂದ ಹೆಗ್ಡೆ ಕರಂಬಾರು, ಶಿಲ್ಪಿ ಈಶ್ವರ ಚಂದ್ರ, ಮರದ ಶಿಲ್ಪಿ ವಸಂತ ಆಚಾರ್ಯ ಇವರನ್ನು ಹಾಗೂ ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಕೆ. ಅವರನ್ನು ಹೆಗ್ಗಡೆಯವರು ಸಮ್ಮಾನಿಸಿದರು. ಯೋಜನೆಯ ಸ್ಥಳೀಯ ಸದಸ್ಯರು ಹಾಗೂ ಶೌರ್ಯ ತಂಡದವರು ಹೆಗ್ಗಡೆಯವರನ್ನು ಗೌರವಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಕೆ. ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಭಟ್ ಪ್ರಸ್ತಾವಿಸಿದರು. ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಗಜಗೌರಿ ವ್ರತ ಎಂಬ ಹರಿಕಥಾ ಸತ್ಸಂಗ ಹಾಗೂ ಗೀತಾ-ಸಾಹಿತ್ಯ-ಸಂಭ್ರಮ ನಡೆಯಿತು.
ದ.ಕ., ಉಡುಪಿ ಜಿಲ್ಲೆಯ ದೇವಸ್ಥಾನಗಳಲ್ಲಿ ಹೊರೆ ಕಾಣಿಕೆ ಎಂಬುದು ವಿಶೇಷ ಕಲ್ಪನೆಯಾಗಿದೆ. ಇದು ಈ ಎರಡು ಜಿಲ್ಲೆಗಳನ್ನು ಬಿಟ್ಟು ಬೇರೆಲ್ಲೂ ಕಾಣ ಸಿಗದು. ಭಕ್ತರು ಉತ್ಸವದ ಯಶಸ್ಸಿಗಾಗಿ ತಾವು ಬೆಳೆದ ಫಲಗಳನ್ನು ತಂದು ಸಮರ್ಪಿಸುವುದು ಸಂಸ್ಕಾರವಾಗಿ ಬೆಳೆದಿದೆ. ಹಣದಲ್ಲಿ ತಿರುಪತಿ ವೆಂಕಟರಮಣ, ಅನುಗ್ರಹದಲ್ಲಿ ಧರ್ಮಸ್ಥಳದ ಸ್ವಾಮಿ ದೊಡ್ಡವನಾಗಿದ್ದಾನೆ- ಡಾ| ಹೆಗ್ಗಡೆ
ನಿರೀಕ್ಷೆಗಿಂತ ಮೀರಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ. ಹಲವಾರು ಮಂದಿ ಐದು ಸಾವಿರ ರೂ. ಕೊಡಬಹುದೆಂದು ಎಣಿಸಿದಲ್ಲಿ ಇಪ್ಪತ್ತೈದು ಸಾವಿರ ರೂ. ಕೊಟ್ಟಿರುವುದು ಆಶ್ಚರ್ಯ ತಂದಿದೆ. ಸಂಪರ್ಕಿಸದೆಯೇ ಹಲವಾರು ದಾನಿಗಳು ಹಲವಾರು ಸೇವೆಗಳನ್ನು ಮಾಡಿದ್ದಾರೆ. ಸುಮಾರು ೫೦ ಲಕ್ಷ ರೂ.ಗಳ ಕರಸೇವೆ ಇಲ್ಲಿ ನಡೆದಿರುವುದು ಶ್ರೀ ಮಹಾದೇವನ ಅನುಗ್ರಹವೇ ಆಗಿದೆ.- ಬಾಲಕೃಷ್ಣ ಭಟ್ ದಡ್ಡು