ಬೆಳ್ತಂಗಡಿ: ಅನಿತಾ ಕೌಲ್ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಶಿಕ್ಷಕರಾದ ಶೇಖ್ ಆದಂ ಸಾಹೇಬ್ ಹಾಗೂ ರಾಮಕೃಷ್ಣ ಭಟ್ ಚೊಕ್ಕಾಡಿ ಆಯ್ಕೆಯಾಗಿದ್ದಾರೆ.
ಶೇಖ್ ಆದಂ ಸಾಹೇಬ್ ನೆಲ್ಯಾಡಿ
ಶಿಕ್ಷಕ, ಸಂಘಟಕ, ಕ್ರಿಯಾಶೀಲ ಬೋಧಕರಾಗಿರುವ ಶೇಖ್ ಆದಂ ಸಾಹೇಬ್ ರವರು 2022ನೇ ಸಾಲಿನ, ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯವರು ಕೊಡಮಾಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು. ಕಡಬ ತಾಲೂಕಿನ ನೆಲ್ಯಾಡಿಯ ಕೌಕ್ರಾಡಿ ಗ್ರಾಮದವರಾದ ಇವರು ಪ್ರಸ್ತುತ ಬಂಟ್ವಾಳ ತಾಲೂಕಿನ ಕಾವಳಪಡೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ದಿನಾಂಕ 22 ಫೆಬ್ರವರಿ 2023 ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಸಮಾರಂಭದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ರಾಮಕೃಷ್ಣ ಭಟ್ ಚೊಕ್ಕಾಡಿ
ಬೆಳ್ತಂಗಡಿ ತಾಲೂಕಿನ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ಸಲ್ಲಿಸುತ್ತಿರುವ ಇವರು, ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯವರು ಕೊಡಮಾಡುವ 2022ನೇ ಸಾಲಿನ, ರಾಜ್ಯ ಮಟ್ಟದ, ಅನಿತಾ ಕೌಲ್ ಉತ್ತಮ ಶಿಕ್ಷಕ ಪುರಸ್ಕೃತರು. ಸಾಹಿತಿ, ಬರಹಗಾರ, ಉತ್ತಮ ಸಂಘಟಕರೂ ಆಗಿರುವ ಇವರು ಬೋಧನೆಯೊಂದಿಗೆ ತನ್ನ ಶಾಲೆಯಲ್ಲಿ ಕಲಾ ಗ್ಯಾಲರಿಯೊಂದಿಗೆ, ಜಲ ಮರುಪೂರಣದಂತಹ ವಿಶೇಷ ಪ್ರಯೋಗಗಳನ್ನು ನಡೆಸಿದವರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈರ್ವರು ಅನಿತಾ ಕೌಲ್ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಲ್ಲಿ ಓರ್ವರು ಇವರಾಗಿದ್ದಾರೆ. ದಿನಾಂಕ 22 ಫೆಬ್ರವರಿ 2023ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಸಮಾರಂಭದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.