ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಆರೋಗ್ಯ ರಕ್ಷಾ ಕಾರ್ಯಕ್ರಮದ ತುರ್ತು ಸಹಾಯನಿಧಿಯ ಉದ್ಘಾಟನೆ ಸೆ.15 ರಂದು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ. ಕೆ. ಹೇಳಿದರು.
ಅವರು ಸೆ.14 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಅನಾರೋಗ್ಯ ಸಂದರ್ಭದಲ್ಲಿ ಒಳರೋಗಿಯಾಗಿ ಆಸ್ಪತ್ರೆ ಚಿಕಿತ್ಸೆಯನ್ನು ದೊರಕಿಸಲು ಪ್ರಾರಂಭಿಸಲಾದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ 20 ವರ್ಷದ ಹಿಂದೆ ಪ್ರಾರಂಭಿಸಿ ಯಶಸ್ವಿಯಾಗಿದೆ. ಈ ವರ್ಷ 2022-23ರ ಸಾಲಿಗೆ 8.75 ಲಕ್ಷ ಸದಸ್ಯರು ನೋಂದಾವಣಿಗೊಂಡಿರುತ್ತಾರೆ.
ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು `ಯೋಜನೆಯ ವತಿಯಿಂದ ಸಂಘಗಳ ಸದಸ್ಯರಿಗೆ ಆರೋಗ್ಯ ರಕ್ಷಾ ಆಸ್ಪತ್ರೆ ವೆಚ್ಚದ ವಿಮಾ ಕಾರ್ಯಕ್ರಮವನ್ನು 2021ರಿಂದ ಆರಂಭಿಸಲಾಯಿತು. ಸಂಪೂರ್ಣ ಸುರಕ್ಷ ಕಾರ್ಯಕ್ರಮದಲ್ಲಿ ಲಭ್ಯವಾಗುವ ವಿಮಾ ಮೊತ್ತವು ಕುಟುಂಬವೊಂದಕ್ಕೆ ರೂ. 1.20 ಲಕ್ಷದವರೆಗೆ ಇರುತ್ತದೆ. ಆರೋಗ್ಯ ರಕ್ಷಾ ಯೋಜನೆಯಲ್ಲಿ ಕೇವಲ ಗಂಡ ಹೆಂಡತಿಯನ್ನು ಸೇರಿಸಿಕೊಂಡು ರೂ. 20,000/-ವರೆಗೆ ಸೌಲಭ್ಯವನ್ನು ನೀಡಲಾಗುತ್ತದೆ. ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ 27.62 ಲಕ್ಷ ಕುಟುಂಬಗಳ 50 ಲಕ್ಷ ಸದಸ್ಯರುಗಳ ನೋಂದಾವಣಿ ಆಗಿರುತ್ತದೆ. ಇವರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು 2022-23ರ ಸಾಲಿಗೆ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲ ತುರ್ತು ಸಹಾಯನಿಧಿ’ ಒಂದನ್ನು ಸ್ಥಾಪಿಸಲಾಗಿದೆ. ಇದರಲ್ಲಿ ರೂ. 2.50 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಆರೋಗ್ಯ ರಕ್ತಾ ಫಲಾನುಭವಿಗಳಿಗೆ ತೀವ್ರತರದ ಖಾಯಿಲೆಗಳಾದ ಕ್ಯಾನ್ಸರ್, ಹಾರ್ಟ್, ಅಟ್ಯಾಕ್, ಕಿಡ್ನಿ ಫೈಲ್ಯೂರ್, ಹೆಡ್ ಇನ್ ಜ್ಯೂರಿ ಮುಂತಾದ ಸಮಸ್ಯೆಗಳಗೆ ತಮಗೆ ದೊರೆಯುವ ಆರೋಗ್ಯ ರಕ್ಷಾ ವಿಮೆಗಿಂತ ರೂ. 50,000/- ವರೆಗೂ ವಿಮಾ ಮೊತ್ತವು ದೊರೆಯುವಂತೆ ಸೌಲಭ್ಯವನ್ನು ಕಲ್ಪಸಲಾಗಿದೆ.
ಯೋಜನೆಯಿಂದ ಪ್ರಾಯೋಜಿಸಲಾದ ಸಂಪೂರ್ಣ ಸುರಕ್ಷಾ ಮತ್ತು ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮವನ್ನು ರಾಷ್ಟ್ರದ ಪ್ರಮುಖ ವಿಮಾ ಕಂಪೆನಿಗಳಾದ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನಿ, ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ, ಓರಿಯೆಂಟಲ್ ಇನ್ಸೂರೆನ್ಸ್ ಕಂಪೆನಿ ಮತ್ತು ಯೂನಿವರ್ಸಲ್ ಸ್ಯಾಂಟೋ ಕಂಪೆನಿಗಳು ಜಂಟಿಯಾಗಿ ವಹಿಸಿಕೊಂಡಿರುತ್ತವೆ. ಈ ವರ್ಷ ನೂತನವಾಗಿ ಆರಂಭಗೊಂಡ ತುರ್ತು ಸಹಾಯನಿಧಿ ಕಾರ್ಯಕ್ರಮವನ್ನು ಲೋಕಾರ್ಪಣೆಗೊಳಸಲು ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರೂ ಆಗಿರುವ ಸುಚಿತಾ ಗುಪ್ತಾರವರು ಭೇಟಿ ನೀಡಲಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಾ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ಜೆನರಲ್ ಮೆನೇಜರ್ ಪೀಟರ್ ಚಿತ್ತರಂಜನ್, ಸಹಾಯಕ ಜೆನರಲ್ ಮೆನೇಜರ್ ಕೇಶವ ಮೋಹನ ಭಾಗವಹಿಸಲಿದ್ದಾರೆ ಎಂದರು ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮಭಿವೃದ್ಧಿಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ ಉಪಸ್ಥಿತರಿದ್ದರು.