ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಬೆಳ್ತಂಗಡಿ ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಭವಾಗಿದೆ. ಇದಕ್ಕೆ ಹೆಚ್ಚಿನ ಬಲ ನೀಡಲು ನಾಗರಹೊಳೆಯಿಂದ ವಿಶೇಷ ಪರಿಣಿತ ಆನೆಕಾವಾಡಿಗಳು ಬುಧವಾರ ಸಂಜೆ ಆಗಮಿಸಿದ್ದಾರೆ.
ಡಿಎಫ್ ಒ ಡಾ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಆರ್ ಎಫ್ ಒ ತ್ಯಾಗರಾಜ್ ಅವರ ನಿರ್ದೇಶನದಂತೆ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಭವಾನಿ ಶಂಕರ್ ರವೀಂದ್ರ ಅಂಕಲಗಿ, ಯತೀಂದ್ರ, ಹರಿಪ್ರಸಾದ್,ಗಸ್ತು ಅರಣ್ಯ ಪಾಲಕರಾದ ಪಾಂಡುರಂಗ ಕಮತಿ, ಶರತ್ ಶೆಟ್ಟಿ,ರವಿ, ಸಂತೋಷ್,ಬಾಲಕೃಷ್ಣ, ವಾಸು ಅವರ ತಂಡದೊಂದಿಗೆ ನಾಗರಹೊಳೆಯ ಆನೆ ಕಾವಾಡಿಗರಾದ ವೆಂಕಟೇಶ,ಓಂಕಾರ್, ವಿಶ್ವ ಹಾಗೂ ಗಣೇಶ್ ಕಾರ್ಯಾಚರಣೆಗೆ ಜತೆಯಾಗಿದ್ದಾರೆ.
ಬುಧವಾರ ರಾತ್ರಿ ತೋಟತ್ತಾಡಿ ಗ್ರಾಮದ ಕಳೆಂಜೊಟ್ಟು ಎಂಬಲ್ಲಿನ ತೋಟ ಒಂದರಲ್ಲಿ ತಂಡಕ್ಕೆ ಕಾರ್ಯಾಚರಣೆ ಸಮಯ ಒಂಟಿ ಸಲಗ ಕಾಣಿಸಿಕ್ಕಿದೆ. ಈ ಆಧಾರದಲ್ಲಿ ಗುರುವಾರ ಹಗಲಿಡಿ ಆನೆಗಳ ಜಾಡನ್ನು ಹುಡುಕುವ ಕೆಲಸ ನಡೆದಿದೆ. ಈ ವೇಳೆ ಆನೆ ಸಂಚರಿಸಿರುವ ಕುರುಹುಗಳು ಕಾಣಿಸಿವೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು,ಈ ಸಮಯ ಚಿಬಿದ್ರೆ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವ ಶಂಕೆ ವ್ಯಕ್ತವಾಗಿದ್ದು ತಂಡವು ಅಲ್ಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಮಳೆ ,ಇಂಬಳ ಕಾಟ
ಕಾರ್ಯಾಚರಣೆಗೆ ಈ ಭಾಗದಲ್ಲಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಇದು ತೀರಾ ಕಾಡಿನ ಪ್ರದೇಶವಾದ ಕಾರಣ ರಾತ್ರಿ ಹೆಚ್ಚಿನ ಕಾರ್ಯ ಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಕಾರ್ಯಾಚರಣೆ ನಡೆಯುವ ಸ್ಥಳಗಳಲ್ಲಿ ಇಂಬಳಗಳ ಕಾಟವು ವಿಪರೀತವಾಗಿದೆ. ಕಾರ್ಯಾಚರಣೆಯಲ್ಲಿ ಸಾಕಷ್ಟು ಸ್ಥಳಿಯರು ಅಗತ್ಯ ಸಹಕಾರ ನೀಡುತ್ತಿದ್ದಾರೆ.
ಶಿಶಿಲದಲ್ಲಿ ಆನೆ:ವದಂತಿ
ಕಾಡಾನೆಯೊಂದು ಜನವಸತಿ ಪ್ರದೇಶದಲ್ಲಿ ತಿರುಗಾಟ ನಡೆಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶಿಶಿಲದಲ್ಲಿ ಬುಧವಾರ ಸಂಚರಿಸಿದ ಕಾಡಾನೆ ಎಂದು ವೈರಲ್ ಮಾಡಲಾಗಿದೆ. ಆದರೆ ಶಿಶಿಲ ಭಾಗದಲ್ಲಿ ಮಂಗಳವಾರ ಸಂಜೆ ವೇಳೆ ಕಾಡಾನೆ ತೋಟಗಳಲ್ಲಿ ತಿರುಗಾಟ ನಡೆಸಿ ನದಿಯನ್ನು ದಾಟಿ ಇನ್ನೊಂದು ಬದಿಗೆ ಹೋಗಿರುವುದಾಗಿಯುಅಲ್ಲದೆ ಪ್ರದೇಶದಲ್ಲಿ ಬುಧವಾರ ಕಾಡಾನೆ ಕಂಡುಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದು ಜಿಲ್ಲೆಯ ಯಾವುದೋ ಬೇರೆ ಭಾಗದ ಅಥವಾ ಹಳೇ ವಿಡಿಯೋ ಆಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ನಾಗರಹೊಳೆಯಿಂದ ವಿಶೇಷ ತಂಡ ಆಗಮಿಸಿದ್ದು, ಇಲಾಖೆಯ ಸಿಬ್ಬಂದಿಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದೆ. ತಂಡಕ್ಕೆ ಬೇಕಾದ ಅಗತ್ಯ ಸಲಕರಣೆ ಹಾಗೂ ಇತ್ಯಾದಿ ವ್ಯವಸ್ಥೆಗಳನ್ನು ಇಲಾಖೆಯಿಂದ ಒದಗಿಸಲಾಗಿದೆ.
ತ್ಯಾಗರಾಜ್, ಆರ್ ಎಫ್ ಒ, ಬೆಳ್ತಂಗಡಿ.