ಬೆಳ್ತಂಗಡಿ: ‘ಶೇ.೭೫ ರಷ್ಟು ಶಾಲೆಗಳು ಅತಿಥಿ ಶಿಕ್ಷಕರಿಂದ ನಡೆಯುತ್ತಿದೆ. ಇಲ್ಲಿ ಅತಿಥಿ ಶಿಕ್ಷಕರಿಗೂ ಜೀವನ ಕಲ್ಪಿಸಬೇಕಾದ ಅನಿವಾರ್ಯತೆಯಿದೆ. ದುಡಿದು ತಿನ್ನೋರಿಗೆ ಅನ್ಯಾಯವಾಗುತ್ತದೋ ಅಲ್ಲಿ ಸಮಘಟನೆ ನ್ಯಾಯ ಒದಗಿಸುವಂತಾಗಬೇಕು ಜತೆಗೆ ವರ್ಗಾವಣೆಯಲ್ಲೂ ವೈಜ್ಞಾನಿಕವಾಗಿ ಚರ್ಚೆ ನಡೆಸಿ ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗಂಭೀರವಾಗಿ ವಿಚಾರ ಮುಂದಿಟ್ಟರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಂಗಳೂರು, ದ.ಕ.ಜಿಲ್ಲಾ ಘಟಕದ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಸೆ.೧೦ ರಂದು ನಡೆದ ಜಿಲ್ಲಾ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಇವತ್ತು ಹೀಗೇಕೆ ಎಂದು ಉತ್ತರ ಕಂಡುಕೊಂಡಿಲ್ಲ. ಶಿಕ್ಷಕರನ್ನು ಶಿಕ್ಷಕರಾಗಿ ನೋಡದೆ ಸರಕಾರಿ ಯಂತ್ರದ ಭಾಗವನ್ನಾಗಿಸಲಾಗಿದೆ. ಹಾಗಾದಲ್ಲಿ ಫಲಿತಾಂಶ ಸಿಗೋದು ಯಾವಾಗ. ಇದರಿಂದ ಶಿಕ್ಷಣ ವ್ಯವಸ್ಥೆ ಬದಲಾವಣೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ದುಡಿದು ತಿನ್ನುವವರ ಬದುಕು ಕಟ್ಟಿ ಕೊಡದೇ ಇದ್ದರೆ ಸಮಾಜ ಅಭ್ಯುದಯ ಸಾಧ್ಯವಿಲ್ಲ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸರಕಾರಿ ಶಾಲೆ ಸ್ಥಿತಿಗತಿ ಚಿಂತಾಜನಕವಾಗಿರುವುದನ್ನು ಮನಗಂಡು ಕ್ಷೇತ್ರದಲ್ಲಿ ಪರಿಪೂರ್ಣ ಶಾಲೆಯ ಸಂಕಲ್ಪತೊಟ್ಟಿದ್ದೇವೆ. ಸರಕಾರ ಅನುದಾನದ ಜತೆಗೆ ಶಾಲೆಯ ಶಿಕ್ಷಕರು, ಊರಿನ ಹಿತೈಷಿಗಳು, ದಾನಿಗಳನ್ನು ಒಗ್ಗೂಡಿಸಿ ಹಂತ ಹಂತವಾಗಿ ಪೂರ್ಣಶಾಲೆ ಅಭಿವೃದ್ಧಿಗೊಳಿಸುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮ ಕ್ಷೇತ್ರದ ಸತ್ ಚಿಂತನೆಯಲ್ಲಿರುವ ಶಿಕ್ಷಕರಿಂದ ಸಾಧ್ಯವಾಗಿದೆ. ಹಾಗಾಗಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಇಬ್ಬರು ಶಿಕ್ಷಕರು ಪಾತ್ರರಾಗಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇ ಗೌಡ, ಕೆ.ಪ್ರತಾಪಸಿಂಹ ನಾಯಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಆಡಳಿತ) ಉಪನಿರ್ದೇಶಕ ಸುಧಾಕರ ಕೆ., ಅಭಿವೃದ್ಧಿ ಉಪನಿರ್ದೇಶಕಿ ರಾಜಲಕ್ಷ್ಮೀ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್., ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ ಬಿ., ಕೊಡಗು ಜಿಲ್ಲಾ ಅಧ್ಯಕ್ಷ ಸೋಮಶೇಖರ ಬಿ., ಉಡುಪಿ ಜಿಲ್ಲೆ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಕಿರಣ್ ಹೆಗ್ಡೆ, ದ.ಕ.ಜಿಲ್ಲೆ ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಜಿ.ತಾವ್ರೊ, ದ.ಕ.ಜಿಲ್ಲಾ ಪ್ರಾ.ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಾಜ್ಯ ಜತೆ ಕಾರ್ಯದರ್ಶಿ ಜಯಕೀರ್ತಿ ಜೈನ್ ಉಪಸ್ಥಿತರಿದ್ದರು.
ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕ ಅಧ್ಯಕ್ಷ ಮಹಮ್ಮದ್ ರಿಯಾಜ್ ಸ್ವಾಗತಿಸಿದರು. ತಾಲೂಕು ಪದಾಧಿಕಾರಿ ನಿರಂಜನ್ ಜೈನ್ ನಿರೂಪಿಸಿದರು. ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳನ್ನು ಗೌರವಿಸಲಾಯಿತು. ಪ್ರೌ.ಶಾ.ಸ.ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ರಮೇಶ್ ಮಯ್ಯ ವಂದಿಸಿದರು.
ಶೈಕ್ಷಣಿಕ ಗೋಷ್ಠಿ
ಕಾರ್ಯಕ್ರಮದಲ್ಲಿ ರಾಜ್ಯ ಸಂಪನ್ಮೂಲವ್ಯಕ್ತಿ ಗುರುದತ್ತ ಎ. ಅವರಿಂದ ಕಲಿಕಾ ಚೇತರಿಕೆ ಮೌಲ್ಯಮಾಪನ ಮತ್ತು ದಾಖಲೀಕರಣ ಕುರಿತು ಹಾಗೂ ಮಾನಸಿಕ ಒತ್ತಡ ನಿವಾರಣೆ ಕುರಿತು ಉಜಿರೆ ಎಸ್.ಡಿ.ಎಂ. ಕಾಲೇಜು ಸ್ನಾತಕೋತ್ತರ ವಿಭಾಗ ಸಹಾಯಕ ಪ್ರಾಧ್ಯಪಕಿ ಡಾ| ವಂದನಾ ಜೈನ್ ಶೈಕ್ಷಣಿಕ ಗೋಷ್ಠಿ ನಡೆಸಿಕೊಟ್ಟರು. ಬಳಿಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ ಬಿ.ಅವರೊಂದಿಗೆ ಶಿಕ್ಷಕರ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಪ್ರತಿ ತಾಲೂಕಿನ ಎಸೆಸೆಲ್ಸಿಯಲ್ಲಿ ಗರಿಷ್ಠಾಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ, ಸಮ್ಮಾನ ನೆರವೇರಿತು.