ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟದ ಕಿಚ್ಚು ಸುಳ್ಯದಿಂದ ಪ್ರಾರಂಭವಾಗಿದ್ದು ಇದಕ್ಕೆ ಮೂಲ ಕಾರಣ ಕೆದಂಬಾಡಿ ರಾಮಯ್ಯ ಗೌಡರ ಹೋರಾಟ. ಅವರ ಹೋರಾಟದ ಫಲವಾಗಿ ಬ್ರಿಟೀಷರು ನಲುಗಿ ಹೋಗಿದ್ದರು. ಬ್ರಿಟೀಷರ ವಿರುದ್ಧ ಹೋರಾಡಿ ದೇಶದ ಧ್ವಜವನ್ನು ಮಂಗಳೂರು ಭಾವುಟಗುಡ್ಡೆಯಲ್ಲಿ ಹಾರಿಸಿದ್ದು ಅದಕ್ಕಾಗಿ ಇಂದು ಅವರ ಇತಿಹಾಸವನ್ನು ಮರುಸೃಷ್ಠಿಸುವ ಉದ್ದೇಶದಿಂದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಕೊಯ್ಯೂರು ಕ್ರಾಸ್ ಬಳಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಯಾತ್ರೆಗೆ ಬೆಳ್ತಂಗಡಿ ತಾಲೂಕಿನಿಂದ ಚಾಲನೆ ನೀಡಿ ಮಾತನಾಡಿ ಬ್ರಿಟಿಷ್ ಸರಕಾರದ ವಿರುದ್ಧ ಕರನಿರಾಕರಣೆ ಮಾಡಿದ ಒಬ್ಬ ಶ್ರೇಷ್ಠ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರು. ಅವರ ಹೋರಾಟದ ಇತಿಹಾಸವನ್ನು ಮನೆ ಮನೆಗಳಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಪದ್ಮಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ, ನ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ಕಾರ್ಯದರ್ಶಿ ಗಣೇಶ್,ಜೊತೆ ಕಾರ್ಯದರ್ಶಿ ಶ್ರೀನಾಥ್,ಕೋಶಾಧಿಕಾರಿ ಬಾಲಕೃಷ್ಣ ಬಿರ್ಮೊಟ್ಟು, ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ, ನಾರಾಯಣ ಗೌಡ, ಬೆಳ್ತಂಗಡಿ ಸಿ.ಎ ಬ್ಯಾಂಕ್ನ ನಿರ್ದೇಶಕ ಶ್ರೀನಾಥ್, ಮಚ್ಚಿನ ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ್, ವಾಣಿ ಪದವಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ಮುಖ್ಯೋಪಾಧ್ಯಾಯ ಲಕ್ಷ್ಮಿನಾರಾಯಣ ಕೆ., ಯುವವೇದಿಕೆಯ ಅಧ್ಯಕ್ಷ ಯಶವಂತ ಗೌಡ ಬೆಳಾಲು, ವಾಣಿ ಸೊಸೈಟಿ ನಿರ್ದೇಶಕರಾದ ಗೋಪಾಲಗೌಡ ದೇವಸ್ಯ, ಹಾಗೂ ಸಂಘದ ನಿರ್ದೇಶಕರು, ಸದಸ್ಯರು, ಹಾಗೂ ಸುಮಾರು ನೂರಕ್ಕೂ ಅಧಿಕ ವಾಹನದಲ್ಲಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.