ಬಂಟ್ವಾಳ: ಬಿಸಿರೋಡಿನಲ್ಲಿ ರೈಲ್ವೆ ಮೇಲ್ಸೆತುವೆಯ ಅಪಾಯಕಾರಿ ಭಾಗಕ್ಕೆ ತಡೆಬೇಲಿ ಹಾಕುವ ಕಾಮಗಾರಿ ನಡೆಯುತ್ತಿದೆ.
ಮಂಗಳೂರು – ಬೆಂಗಳೂರು ರೈಲ್ವೆ ಮಾರ್ಗದ ಮಧ್ಯೆ ಬಿಸಿರೋಡಿನ ಸಿ.ಟಿ.ಯ ಭಾಗದಲ್ಲಿ ಹಾದುಹೋಗುವ ರೈಲ್ವೆ ಹಳಿಯ ಕ್ರಾಸಿಂಗ್ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೆತುವೆ ನಿರ್ಮಾಣ ಮಾಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿರೋಡಿನ ಪ್ಲೈ ಓವರ್ ಮತ್ತು ಸರ್ವೀಸ್ ರಸ್ತೆ ಸಂಪರ್ಕವನ್ನು ಹೊಂದಿರುವ ಹಳೆಯ ರೈಲ್ವೆ ಮೇಲ್ಸೆತುವೆಯ ಎರಡು ಭಾಗ ಅಪಾಯಕಾರಿಯಾಗಿದ್ದು, ಇದರಿಂದ ನಡೆಯುವ ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಸುರಕ್ಷತಾ ತಡೆ ಬೇಲಿಯನ್ನು ಹಾಕುತ್ತಿದೆ.
ಇನ್ನೊಂದು ಮಾಹಿತಿ ಪ್ರಕಾರ ವಿದ್ಯುತ್ ಚಾಲಿತ ರೈಲು ಓಡಾಡುವ ದೃಷ್ಟಿಯಿಂದ ರೈಲ್ವೆ ಹಳಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ಲೈನ್ ಕಾಮಗಾರಿ ಮುಗಿದಿದೆ. ಹಾಗಾಗಿ ಅಪಾಯಕಾರಿ ವಿದ್ಯುತ್ ಗೆ ಯಾವುದೇ ದುರ್ಘಟನೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವನ್ನು ಇಲಾಖೆ ವಹಿಸಿಕೊಂಡು ಈ ಮೆಟಲ್ ತಡೆಬೇಲಿಯನ್ನು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಅಪಾಯಕಾರಿ ರೈಲ್ವೆ ಮೇಲ್ಸೆತುವೆಯಿಂದ ಕೆಳಕ್ಕೆ ಯಾವುದೇ ವಸ್ತುಗಳಾಗಲಿ, ಮನುಷ್ಯ, ಪ್ರಾಣಿ, ಪಕ್ಷಿ ಹಾಗೂ ಇತರ ಜೀವಗಳು ಬಿದ್ದು ಬಲಿಯಾಗಬಾರದು ಎಂದು ಮುಂಜಾಗ್ರತಾ ಕ್ರಮವನ್ನು ಇಲಾಖೆ ತಡವಾಗಿ ಕೈಗೊಂಡಿದೆ.