ಬಂಟ್ವಾಳ: ಕಳೆದ ಏಳು ತಿಂಗಳ ಹಿಂದೆ, ಹಿಂಬಾಗಿಲು ಮುರಿದು ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ, ಕಳವುಗೈದಿರುವ ಸೊತ್ತಗಳನ್ನು ವಶಕ್ಕೆ ಪಡೆದು ಆರೋಪಿ ಗೆ ನ್ಯಾಯಾಂಗ ಬಂಧನ ವಿಧಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಣ್ಣೂರು ಜಿಲ್ಲೆಯ, ಕೂಟ ಪರಂಬ ಗ್ರಾಮ, ಆಲಕೋಡ್, ತಳಿಪರಂಬ, ಕೊಲ್ಲಪರಂಬಿಲ ನಿವಾಸಿ ಯೂಸುಫ್ ಎಂಬವರ ಮಗ ಮಹಮ್ಮದ್ ಕೆ ಯು. ಬಂಧಿತ ಆರೋಪಿ.
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಹಂಝ ಮುರ ಉಮ್ಮರ್ ಎಂಬವರ ಮನೆಯಲ್ಲಿ ಮಾ.09 2022 ರಂದು ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 4,28,000 ಮೌಲ್ಯದ 107 ಗ್ರಾಂ ತೂಕದ ಚಿನ್ನವನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ ವೇಳೆ ಚಿನ್ನವನ್ನು ಕಾಸರಗೂಡಿನಲ್ಲಿ ಮಾರಾಟ ಮಾಡಿದ ಬಗ್ಗೆ ತಿಳಿದು ಬಂದಿದೆ. ಆರೋಪಿ ಕೈಯಿಂದ ಸುಮಾರು 3,71,600 ಮೌಲ್ಯದ 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಣೆ ಅವರ ನಿರ್ದೇಶನದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕುಮಾರ ಚಂದ್ರ ರವರು ಹಾಗೂ ಬಂಟ್ವಾಳ ಡಿ.ವೈ.ಎಸ್.ಪಿ ಪ್ರತಾಪಸಿಂಗ್ ತೋರಟ್ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್ ಇ ಇವರ ನೇತೃತ್ವದಲ್ಲಿ ಠಾಣಾ ಪಿಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ, ರುಕ್ಮಾ ನಾಯ್ಕ್ ಪಿಎಸ್ಐ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.