ಬಂಟ್ವಾಳ: ಎ.15 ರಂದು ಕ್ಷೇತ್ರದ ಜನರ ಪರವಾಗಿ ನಾಮಪತ್ರ ಸಲ್ಲಿಸಲಿದ್ದೇನೆ, ನಾಮಪತ್ರ ಸಲ್ಲಿಸುವ ಮೊದಲು ಕ್ಷೇತ್ರದ ಜನರ ಆಶೀರ್ವಾದ ಪಡೆಯುವ ಉದ್ದೇಶದಿಂದ ನಿಮ್ಮ ಬಳಿಗೆ ಬಂದಿದ್ದೇನೆ, ನಿಮ್ಮ ಪ್ರೀತಿ, ಹರಕೆ, ಹಾರೈಕೆ ನನಗೆ ಇರಲಿ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಅವರು ಅಮ್ಟಾಡಿ ಶಕ್ತಿ ಕೇಂದ್ರದ ಯೋಗೀಶ್ ಸುವರ್ಣ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪವಿತ್ರ ವಿಷು ಹಬ್ಬದ ದಿನದಂದು ಬೆಳಿಗ್ಗೆ 8 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕಾಲ್ನಡಿಗೆಯಲ್ಲಿ ಬಿಸಿರೋಡಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದವರು ತಿಳಿಸಿದರು.
ರಾಜ್ಯದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ವಿಧಾನ ಸಭಾ ಚುನಾವಣೆಯ ದಿನ ನಿಗದಿಯಾಗಿದ್ದು, ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ನಾಯ್ಕ್ ಅವರ ಹೆಸರು ಘೋಷಣೆಯಾಗಿದೆ. ಚುನಾವಣೆಗೆ ಇನ್ನು ಕೇವಲ 27 ದಿನಗಳು ಮಾತ್ರ ಉಳಿದಿದ್ದು, ಈ ದಿನಗಳಲ್ಲಿ ರಾಜೇಶ್ ನಾಯ್ಕ್ ಅವರ ಜೊತೆಯಾಗಿ ನಿಂತು ಗೆಲುವಿಗಾಗಿ ಶ್ರಮಿಸಿ ಮುಂದಿನ ಐದು ವರ್ಷಗಳ ಕಾಲ ಅವರು ನಿಮ್ಮ ಜೊತೆ ನಿಲ್ಲುತ್ತಾರೆ ಎಂದು ತಿಳಿಸಿದರು.
ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನಿಲ್ ಕಾಯರಮಾರ್, ಸದಸ್ಯರಾದ ವಿಜಯಕುಮಾರ್, ಪ್ರಭಾಕರ, ಫೆಲಿಕ್ಸ್ ,ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ, ಅಮ್ಟಾಡಿ ಶಕ್ತಿ ಕೇಂದ್ರದ ಪ್ರಭಾರಿ ಯಶೋಧರ ಕರ್ಬೆಟ್ಟು, ಸಂಚಾಲಕ ದೇವದಾಸ್ ಕೆಂಪುಗುಡ್ಡೆ, ಕ್ಷೇತ್ರದ ಕಾರ್ಯದರ್ಶಿಗಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸೀತಾರಾಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಅಭ್ಯರ್ಥಿಯಾಗಿ ಘೋಷಣೆಗೊಂಡ ರಾಜೇಶ್ ನಾಯ್ಕ್ ಅವರಿಗೆ ಅಮ್ಟಾಡಿ ಗ್ರಾಮದ ಮಹಿಳೆಯರು ಆರತಿ ಬೆಳಗಿ ಹಣೆಗೆ ಕುಂಕುಮ ಹಚ್ಚಿ ಸ್ವಾಗತಿಸಿದರು.