ಬಂಟ್ವಾಳ : ಪರವಾನಿಗೆಯನ್ನು ದುರುಪಯೋಗಪಡಿಕೊಂಡು ಕಾಡಿನಿಂದ ಕಡಿದ ಮರವನ್ನು ಖಾಸಗಿ ಮರದ ಮಿಲ್ ಒಂದಕ್ಕೆ ಸಾಗಿಸಿದ್ದಾನೆ ಎಂಬ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಬೇಕು ಎಂದು ಒತ್ತಾಯಿಸಿ ಬಂಟ್ವಾಳ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಜುಲೈ 4 ರಂದು ಬಂಟ್ವಾಳ ಯುವಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ ತಿಳಿಸಿದ್ದಾರೆ.
ಇಲ್ಲಿನ ಕೊಡ್ಯಮಲೆ ಕಾಡಿನಿಂದ ಮರವನ್ನು ಕಡಿಯಲು ನಾವೂರದ ವ್ಯಕ್ತಿಯೋರ್ವನಿಗೆ ಅರಣ್ಯ ಇಲಾಖೆ ಪರವಾನಿಗೆ ನೀಡಿತ್ತು. ಅ ಪರವಾನಿಗೆ ಪ್ರಕಾರ ಆತ ಮರಗಳನ್ನು ಕಡಿದು ಸರಕಾರದ ನಿಯಮದಂತೆ ಮರದ ಮಿಲ್ ಗೆ ಮರಗಳನ್ನು ಸಾಗಿಸಬೇಕಿತ್ತು. ಆದರೆ ಈತ ಕಡಿದ ಮರಗಳನ್ನು ಸರಕಾರದ ಅಧೀನದಲ್ಲಿರುವ ಮರದ ಮಿಲ್ ಗೆ ಸಾಗಿಸದೆ ಆತನ ಸ್ವಂತ ಮನೆಯಲ್ಲಿರುವ ಮಿಲ್ ನಲ್ಲಿ ದಾಸ್ತಾನು ಮಾಡಿದ್ದಾನೆ, ಇದೊಂದು ಕಾನೂನು ಬಾಹಿರವಾಗಿದ್ದು, ಈತನ ಮೇಲೆ ಪ್ರಕರಣ ದಾಖಲಿಸಿ ,ಈತನ ಮರದ ವ್ಯಾಪಾರ ಮಾಡುವ ಪರವಾನಿಗೆಯನ್ನು ರದ್ದುಮಾಡಬೇಕು ಎಂದು ಯುವ ಮೋರ್ಚಾ ಒತ್ತಾಯಿಸಿದೆ.
ಕಳೆದ ಜೂನ್ 31 ನೇ ಸೋಮವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಈತನ ಮೇಲೆ ಪ್ರಕರಣ ದಾಖಲಿಸಬೇಕಿತ್ತು. ಆದರೆ ಇಲಾಖೆ ಆತನ ಮೇಲೆ ಮೃದುದೋರಣೆ ತೋರಿಸಿದ್ದು ,ನಾಲ್ಕು ದಿನವಾದರೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪ ಮಾಡಿದ್ದಲ್ಲದೆ, ಇದರ ವಿರುದ್ದ ಅರಣ್ಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆ ಮಾಹಿತಿ ಇಲ್ಲ: ರಾಜೇಶ್ ಬಳಿಗಾರ್
ಕಚೇರಿ ಮುಂಭಾಗದಲ್ಲಿ ನಡೆಸುತ್ತೇವೆ ಎನ್ನಲಾದ ಬಿಜೆಪಿ ಯುವಮೋರ್ಚಾದ ಪ್ರತಿಭಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರುದಾರರ ದೂರಿಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳ ಮೇಲೆ ತನಿಖೆ ನಡೆಸಲಾಗಿದೆ. ಆತ ಮಾಡಿದ್ದಾನೆ ಎಂಬ ಆರೋಪಕ್ಕೆ ಬೇಕಾದ ಸಾಕ್ಷಿಗಳು ಸಿಕ್ಕಿಲ್ಲ.
ಪರ್ಮಿಟ್ ಗೂ ಲೋಡ್ ಮಾಡಿದ ಮರಕ್ಕೂ ಟ್ಯಾಲಿ ಆಗುತ್ತಿರುವುದರಿಂದ ಅವನ ಮೇಲೆ ಪ್ರಕರಣ ದಾಖಲು ಮಾಡಲು ಅಸಾಧ್ಯವೆಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದ್ದಾರೆ.
ದೇವಶ್ಯಪಡೂರು ಗ್ರಾಮದ ಕುಂಟಾಲ್ ಪಲ್ಕೆ ಎಂಬಲ್ಲಿ ಪ್ಲಾಂಟೇಷನ್ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆ ಆತನಿಗೆ ಪರವಾನಿಗೆ ನೀಡಿದೆ. ಪರವಾನಿಗೆಯ ಪ್ರಕಾರ ಆತ ಮರಗಳನ್ನು ಕಡಿದು ಸಾಗಾಟ ಮಾಡಿದ್ದಾನೆ. ಮರ ಕಡಿದ ಬಳಿಕ ಜಾಗದಲ್ಲಿ ಪ್ಲಾಂಟೇಷನ್ ಕೂಡ ಮಾಡಲಾಗಿದೆ.
ಕಡಿದ ಮರಗಳನ್ನು ಲಾರಿಯಲ್ಲಿ ಲೋಡ್ ಮಾಡಿ ಆತನ ಮನೆಯ ಬಳಿ ನಿಲ್ಲಿಸಿದ್ದ ಎಂದು ನೀಡಿದ ದೂರಿನಂತೆ ಅರಣ್ಯ ಇಲಾಖೆ ತನಿಖೆ ನಡೆಸಿದೆ. ರಾತ್ರಿ ಮತ್ತು ಜೋರಾಗಿ ಮಳೆ ಬರುತ್ತಿದ್ದ ಕಾರಣಕ್ಕಾಗಿ ಇಲಾಖೆಯ ಸಿಬ್ಬಂದಿ ಗಳಿಗೆ ತಿಳಿಸಿ ಮರವನ್ನು ತುಂಬಿಸಿ ಲಾರಿಯನ್ನು ಮನೆಯ ಸಮೀಪದಲ್ಲಿ ನಿಲ್ಲಿಸಿದ್ದ. ನಿಲ್ಲಿಸಿದ ಲಾರಿಯಲ್ಲಿದ್ದ ಮರ ಮತ್ತು ನೀಡಿದ ಪರವಾನಿಗೆ ಪ್ರಕಾರ ಹೋಲಿಕೆಯಾಗುವುದರಿಂದ ಇಲ್ಲಿ ಯಾವುದೇ ದುರುಪಯೋಗ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.