ಬಂಟ್ವಾಳ: ಬಂಟ್ವಾಳ ಪುರಸಭೆಯ ಸಜೀಪ ನಡು ಕಂಚಿನಡ್ಕ ಪದವಿನ ಘನತ್ಯಾಜ್ಯ ಘಟಕದ ಅವ್ಯವಸ್ಥೆಯ ಬಗ್ಗೆ ಸ್ಥಳೀಯರ ಅಹವಾಲಿನ ಮೇರೆಗೆ ಪರಿಶೀಲನೆ ನಡೆಸಿದ ಶಾಸಕ ಯು.ಟಿ.ಖಾದರ್ ಅವರು ಘಟಕಕ್ಕೆ ಸ್ವತಃ ಬೀಗಜಡಿದಿದ್ದಾರೆ.
ಬಂಟ್ಟಾಳ ಪುರಸಭೆಯ ಘನತ್ಯಾಜ್ಯ ಘಟಕ ತಕ್ಕ ಬಂಟ್ವಾಳ ಹೊರ ವಲಯದ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 2007ರಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು.ಆದರೆ ಘಟಕ ನಿರ್ಮಾಣ ಮಾಡಲು ಸ್ಥಳೀಯರ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯ ಶಾಸಕನ ನೆಲೆಯಲ್ಲಿ ಯು.ಟಿ.ಖಾದರ್ ರವರು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಬಳಿಕದ ಬೆಳವಣಿಗೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೆವಾರಿ ಮಾಡುವ ಭರವಸೆ ಜಿಲ್ಲಾಧಿಕಾರಿ ಸಭೆಯಲ್ಲಿ ದೊರೆತ ಹಿನ್ನೆಲೆಯಲ್ಲಿ ತ್ಯಾಜ್ಯ ಘಟಕ ಆರಂಭಗೊಂಡಿತ್ತು.
ಘಟಕದಲ್ಲಿ ಕೇವಲ ಒಣಕಸ ಮಾತ್ರ ಹಾಕಲು ನಿರ್ಧಾರಕ್ಕೆ ಬಂದು ಅದರಿಂದ ಬರುವ ಆದಾಯವನ್ನು ಸ್ಥಳೀಯ ಪಂಚಾಯತ್ ಗೆ ನೀಡುವ ಒಪ್ಪಂದ ನಡೆಸಿ ಬಂಟ್ವಾಳ ಪುರಸಭೆಗೆ ಸೂಚನೆ ನೀಡಲಾಗಿತ್ತು.ಆದರೆ ಇತ್ತೀಚೆಗಿನದಿನಗಳಲ್ಲಿಹಸಿಕಸಗಳನ್ನೂಈ ಘಟಕಕ್ಕೆ ತಂದು ಹಾಕಲಾಗಿದ್ದು. ಪರಿಸರದಲ್ಲಿ ಗಬ್ಬು ವಾಸನೆ ಹರಡಿಕೊಂಡಿದೆ.
ಈ ಕುರಿತಾಗಿ ಸಜಿಪನಡು ಗ್ರಾ.ಪಂ.ಮಾಜಿ ಅಧ್ಯಕ್ಷ ನಾಸಿರ್ ಸಜಿಪ ಅವರು ಘಟಕದ ಹಸಿ ತ್ಯಾಜ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಹೋರಾಟದ ಮುನ್ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಶಾಸಕರಿಗೂ ದೂರು ಹೋಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಯು.ಟಿ.ಖಾದರ್, ಪುರಸಭೆಯ ಬೇಜವಬ್ದಾರಿಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಘಟಕಕ್ಕೆಬೀಗ ಜಡಿದಿದ್ದಾರೆ. ಈ ಸಂದರ್ಭ ಪ್ರಮುಖರಾದ ಚಂದ್ರಹಾಸ ಕರ್ಕೇರ, ಯಶವಂತ ದೇರಾಜೆ, ಅಬ್ದುಲ್ರಝಾಕ್ ಕುಕ್ಕಾಜೆ, ಅಬೂಬಕರ್ ಸಜಿಪ, ತುಳಸಿ ಮೊದಲಾದವರು ಉಪಸ್ಥಿತರಿದ್ದರು.