ಬಂಟ್ವಾಳ : ತುಳು ನಾಟಕ ಕಲಾವಿದರ ಒಕ್ಕೂಟದ ಬಂಟ್ವಾಳ ತಾಲೂಕು ಘಟಕದ ವತಿಯಿಂದ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಒಂದು ವಾರ ನಡೆದ ವರೆಗೆ ತುಳು ನಾಟಕ ಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ತಾಂಬೂಲ ಕಲಾವಿದೆರ್ ತಂಡದ ಪರಿಮಳ ಕಾಲೊನಿ ನಾಟಕ ಪ್ರಥಮ ಪ್ರಶಸ್ತಿ ಪಡೆದಿದೆ.
ಅಭಿನಯ ಕಲಾವಿದೆರ್ ಕುಡ್ತಮುಗೇರ್ ತಂಡದ ನನ ದಾದ ಒರಿಂಡ್ ದ್ವಿತೀಯ, ಓಂ ಶ್ರೀ ಕಲಾವಿದೆರ್ ಬಿ.ಸಿ.ರೋಡ್ ತಂಡದ ಅಂದ್ಂಡ ಅಂದ್ ಪನ್ಲೆ ತೃತೀಯ ಸ್ಥಾನ ಪಡೆದಿದೆ. ಶುಕ್ರವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಭಾಷೆ, ಸಂಸ್ಕೃತಿಯ ಉಳಿವಿಗೆ ತು ಳು ನಾಟಕಗಳ ಕೊಡುಗೆ ಅಪಾರ. ರಂಗ ಭೂಮಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದರು. ಬಂಟ್ವಾಳ ಸ್ವರ್ಣೋದ್ಯಮಿ ಬಿ.ನಾಗೇಂದ್ರ ಬಾಳಿಗ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಒಕ್ಕೂಟದ ಬಂಟ್ವಾಳ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ತುಕಾರಾಮ ಪೂಜಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ಆಚಾರ್ಯ, ದ. ಕ. ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ,ಚಲನಚಿತ್ರ ನಟ ವಿನೀತ್ ವಿ.ಜೆ., ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಮಾಕ್ಸಿಂ ಸಿಕ್ವೇರಾ,ಕೋಶಾಽಕಾರಿ ಐವಾನ್ ಡಿಸೋಜ, ಸಮಿತಿ ಸಹ ಸಂಚಾಲಕ ಪದ್ಮನಾಭ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ, ವಿನೀತ್ ವಿಜೆ, ತೀರ್ಪುಗಾರರಾದ ರಾಮಚಂದ್ರ ರಾವ್, ಸದಾಶಿವಗಿರಿ ಕಲ್ಲಡ್ಕ, ಮಧು ಬಂಗೇರ ಕಲ್ಲಡ್ಕ ಅವರನ್ನು ಸಮ್ಮಾನಿಸಲಾಯಿತು. ದಿವಾಕರ ದಾಸ್ ಸ್ವಾಗತಿಸಿದರು. ಮಂಜು ವಿಟ್ಲ ವಂದಿಸಿದರು. ರಾಮಚಂದ್ರ ರಾವ್ ಫಲಿತಾಂಶ ವಿವರ ನೀಡಿದರು. ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.