ಬಂಟ್ವಾಳ: ಅನೇಕ ಹೋರಾಟ, ಸಾಂದರ್ಭಿಕ ಕಷ್ಟಗಳು, ನೋವು ಸಂಕಟಗಳ ನಡುವೆಯೂ ಸಂಘದ ತತ್ವವನ್ನು ಬಿಡದ ಹಿರಿಯ ಜೀವಗಳೇ ಪಕ್ಷದ ಬಲವರ್ಧನೆಗೆ ನಿಜವಾದ ಕಾರಣ ಮತ್ತು ಪ್ರೇರಣೆ ಎಂದು ಬಿಜೆಪಿ ಹಿರಿಯ ನಾಗರಿಕ ಪ್ರಕೋಷ್ಠದ ರಾಜ್ಯ ಸಂಚಾಲಕ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರ ಗಂಜೀಮಠದಲ್ಲಿರುವ ಒಡ್ಡೂರು ಫಾರ್ಮ್ ನಲ್ಲಿ ಮಂಗಳವಾರ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದ ಹಿತಕ್ಕಾಗಿ ಶ್ರಮಿಸಿದ ಹಿರಿಯ ಮನಸ್ಸುಗಳು ಇಲ್ಲಿವೆ, ಒಂದಲ್ಲ ಒಂದು ಬಗೆಯಲ್ಲಿ ಕಷ್ಟ ,ನೋವು, ಸಂಕಟ ಅನುಭವಿಸಿದ್ದರೂ, ತಮ್ಮ ಸಂಘ ತತ್ವವನ್ನು ಬಿಡದ ಹಿರಿಯ ಜೀವಗಳು ಇಂದಿಲ್ಲಿ ಸೇರಿದ್ದು,ಹೇಗೆ ಬದುಕಬೇಕೆಂದು ತೋರಿಸಿಕೊಟ್ಟ ಹಿರಿಯರ ಆದರ್ಶ ಬಿಜೆಪಿಯ ಜೊತೆಗಿದೆ. 1925 ರ ಇಸವಿಯಂದು ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. ದೇಶ ಸರಿಯಾದ ದಿಕ್ಕಿನಲ್ಲಿ ಪಯಣಿಸಲು ರಾಷ್ಟ್ರೀಯ ಸ್ವಯಂ ಸೇವಕರ ಸಂಘ. ಇಂದು ಪ್ರಧಾನಿಯಿಂದ ತೊಡಗಿ ಗ್ರಾ.ಪಂ.ಸದಸ್ಯನವರೆಗೂ , ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಬಿಜೆಪಿ ಅಧಿಕಾರ ಕ್ಕೆ ಬರುವಲ್ಲಿ ಅನೇಕ ಹಿರಿಯರ ಹೋರಾಟ,ಶ್ರಮ ಅಡಗಿದೆ ಎಂದರು.
ದೇಶದ ಮುಂದಿನ ಪ್ರಗತಿಯ ದೃಷ್ಠಿಯಿಂದ ನಿರ್ಣಾಯಕ ಹಂತದಲ್ಲಿ ನಾವಿದ್ದು, ಕರ್ನಾಟಕದಲ್ಲಿ 2023 ಕ್ಕೆ ನಡೆಯುವ ವಿಧಾನಸಭೆ ಹಾಗೂ 2024 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು,ಈ ದೆಸೆಯಲ್ಲಿ ವಿಶ್ವಾಸದೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅವರು ಮಾತನಾಡಿ, ಪಕ್ಷದ ಬಲವರ್ಧನೆಯಲ್ಲಿ ಬಂಟ್ವಾಳದ ಕೊಡುಗೆ ಅಪೂರ್ವವಾಗಿದೆ, ಕಲ್ಲಡ್ಕ ಪ್ರಭಾಕರ ಭಟ್,ಅವರ ಪತ್ನಿ ಕಮಲಾ ಪ್ರಭಾಕರ ಭಟ್ ರವರ ನಿರಂತರ ಮಾರ್ಗದರ್ಶನದೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದೇವೆ ಎಂದರು.
ಬಿಜೆಪಿ ಸಂಸ್ಥಾಪಕ ಶ್ಯಾಂ ಪ್ರಸಾದ್ ಮುಖರ್ಜಿಯವರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದ ಅವರು ದೇಶಕ್ಕೋಸ್ಕರ ಹಿರಿಯರ ಸಮರ್ಪಿತ ಮನೋಭಾವದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ದ.ಕ.ಜಿಲ್ಲೆಯಲ್ಲು ಪಕ್ಷದ ಹಿರಿಯರ ಮಾರ್ಗದರ್ಶನ, ಅಶೀರ್ವಾದದಿಂದಾಗಿ ಪಕ್ಷ ಭದ್ರವಾದ ನೆಲೆಕಂಡಿದೆ ಎಂದರು.
ಭಾವುಕರಾದ ಪೂಜಾರಿ:
ಸಭಾಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಮಾತನಾಡಿ ತುರ್ತುಪರಿಸ್ಥಿತಿಯ ಮೊದಲಿನ ಕಾಲಘಟ್ಟದಲ್ಲಿ ಪಕ್ಷದ ಹಿತಕ್ಕಾಗಿ ದುಡಿದವರ ನೆನಪು ಮಾಡಿಕೊಂಡು ಅವರನ್ನು ಗುರುತಿಸಿರುವುದು ಅಭಿಮಾನದ ಸಂಗತಿ ಎಂದರು.
ತಾನು ಜಿಪಂ ಸದಸ್ಯ, ಮೂರು ಬಾರಿ ಶಾಸಕನಾಗಲು ಪಕ್ಷದ ಕಾರ್ಯಕರ್ತರ ಅವಿರತಶ್ರಮವನ್ನು ನೆನಪಿಸಿದ ರುಕ್ಮಯ ಪೂಜಾರಿ ಅವರು ತುರ್ತುಪರಿಸ್ಥಿತಿಯ ಕಾಲದಲ್ಲಿ ತಾನು ಮತ್ತು ಸಂಗಡಿಗರು ಅನುಭವಿಸಿದ ಜೈಲುವಾಸ ಸಹಿತ ನೋವುಗಳನ್ನು ಮೆಲುಕು ಹಾಕಿದರಲ್ಲದೆ ಅಂತಹ ಹಿರಿಯರನ್ನು ಕಾಣುವ ಸೌಭಾಗ್ಯವನ್ನು ಕಲ್ಪಿಸಿಕೊಟ್ಟ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಿಚ್ಛಳಬಹುಮತ ಪಡೆದುಕೊಳ್ಳುತ್ತದೆ, ಬಂಟ್ವಾಳವನ್ನು ಬಿಜೆಪಿಯ ಕೈ ತಪ್ಪದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕಾರ್ಯಕರ್ತರ ಕಾರ್ಯ ಎಂದ ಅವರು ಯಾವುದೇ ವ್ಯತ್ಯಾಸಗಳಿದ್ದರೂ ಹಿರಿಯರ ಗಮನಕ್ಕೆ ತಂದು ಪರಿಹರಿಸಿಕೊಂಡು ಒಂದೇ ಕುಟುಂಬದ ಸದಸ್ಯರಂತಿದ್ದು,ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ಪಕ್ಷವನ್ನು ಕಟ್ಟುವಲ್ಲಿ ಅನೇಕ ಹಿರಿಯರ ಶ್ರಮ ಇದರಲ್ಲಿ ಅಡಗಿದೆ, ಅಂತಾ ಹಿರಿಯರನ್ನು ಗುರುತಿಸಬೇಕೆನ್ನುವುದು ಪಕ್ಷದ ಆಶಯವಾಗಿದ್ದು, ಪಕ್ಷದ ಸೂಚನೆಯಂತೆ ಹಿರಿಯ ಮನಸ್ಸುಗಳನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಹಿರಿಯ ನಾಗರಿಕ ಪ್ರಕೋಷ್ಠದ ಸಂಚಾಲಕರಾದ ನಾರಾಯಣ ಗಟ್ಟಿ ,ಬಿಜೆಪಿ ಬಂಟ್ವಾಳಕ್ಷೇತ್ರದ ಸಂಚಾಲಕ ರಾಮಕೃಷ್ಣ ಮಯ್ಯ,ಸಹಸಂಚಾಲಕ ಗೋಪಾಲ ಸುವರ್ಣ ಬಿ.ಸಿ.ರೋಡು, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಭಟ್,ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕಮಲಾಪ್ರಭಾಕರ ಭಟ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸರಪಾಡಿ ಅಶೋಕ ಶೆಟ್ಟಿ, ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತರಾದ ಸೇಸಪ್ಪಕೋಟ್ಯಾನ್,ಜಯರಾಮ ಆಚಾರ್ಯ,ವೆಂಕಟೇಶ್ ಬಂಟ್ವಾಳ, ವೆಂಕಪ್ಪನಲಿಕೆ ಅವರನ್ನು ಅಭಿನಂದಿಸಲಾಯಿತು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ “ವಂದೇಮಾತರಂ”ಗೀತೆ ಹಾಡಿದರು.
ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು. ಇನ್ನೊರ್ವ ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರ್ವಹಿಸಿದರು.