ಬಂಟ್ವಾಳ: ಬೆಂಗಳೂರು ರೈಲು ಹತ್ತಲು ಉಪನ್ಯಾಸಕಿಯೊಬ್ಬರು ರೈಲುನಿಲ್ದಾಣದಲ್ಲಿ ಕಾದು ನಿಂತಿದ್ದಾರೆ, ಸಂಜೆಯ ಹೊತ್ತು ಭಾರೀ ಶಬ್ದದ ಜೊತೆ ರೈಲು ನಿಲ್ದಾಣದತ್ತ ಆಗಮಿಸುತ್ತಿದ್ದರೆ, ಬ್ಯಾಗ್ ಗಳನ್ನು ಹೊತ್ತ ಪ್ರಯಾಣಿಕರು ರೈಲಿನತ್ತ ಸಾಗಲು ಮುಂದಾಗಿದ್ದಾರೆ.ಈ ಉಪನ್ಯಾಸಕಿಯೂ ಎರಡು ಬ್ಯಾಗ್ ಗಳನ್ನು ಹೊತ್ತು ರೈಲಿನ ಎಸಿ ಕೋಚ್ ಅನ್ನು ಹುಡುಕುತ್ತಿದ್ದಾರೆ, ಹಿಂದಿನಿಂದ ಯಾರೋ ಬಿದ್ದ ಸದ್ದು ಕೇಳುತ್ತದೆ, ಆಗ ಆ ಉಪನ್ಯಾಸಕಿ ಬಿದ್ಧ ಆ ವ್ಯಕ್ತಿಗೆ ಉಪಚಾರ ನೀಡಿ, ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಡುತ್ತಾರೆ ಆ ಉಪನ್ಯಾಸಕಿ ಹೋಗಬೇಕಿದ್ದ ರೈಲು ಬೆಂಗಳೂರಿನತ್ತ ಹೊರಟಿರುತ್ತದೆ. ಇದು ಯಾವುದೋ ಸಿನಿಮಾದ ಕತೆಯಲ್ಲ, ನೆಲ್ಯಾಡಿಯ ಉಪನ್ಯಾಸಕಿಯೊಬ್ಬರು ಬಂಟ್ವಾಳ ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದಲ್ಲಿ ಹೃದಯವಂತಿಕೆ ಮೆರೆದು ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ ಕತೆ.
ನೆಲ್ಯಾಡಿಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಹೇಮಾವತಿ ಸೆ.28ರಂದು ಬಂಟ್ವಾಳದಿಂದ ಬೆಂಗಳೂರಿಗೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ರೈಲುಬಂತು ಅತ್ತ ಹೋಗಬೇಕು ಎನ್ನುವಷ್ಟರಲ್ಲಿ ಎಲ್ಲವೂ ನಡೆದು ಹೋಗಿತ್ತು”ಆ ಬಿದ್ದ ವ್ಯಕ್ತಿ ಬೆವರುತ್ತಿದ್ದರು. ಮೈ ತಣ್ಣಗಿತ್ತು. ಆಂಬ್ಯುಲೆನ್ಸ್ಗೆ ಕರೆ ಮಾಡಲು ಪ್ರಯತ್ನಿಸಿದರು. ಆ ಸಂದರ್ಭ ರೈಲು ಹೊರಟು ಹೋಯಿತು. ಸುತ್ತಲೂ ಯಾರೂ ಇರಲಿಲ್ಲ. ನಾನು ಅವರನ್ನೂ ಒಳಗೊಂಡಂತೆ ಎಲ್ಲಾ ನಾಲ್ಕು ಚೀಲಗಳನ್ನು ತೆಗೆದುಕೊಂಡೆ. ಅವರನ್ನು ಹಿಡಿದುಕೊಂಡು ನಿಲ್ದಾಣದ ಹೊರಗೆ ಹೋದೆ.
ಆಟೋ ರಿಕ್ಷಾ ಹಿಡಿದು ಬಿ.ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಹೋದೆ. ಅವರು ಚೇತರಿಸಿಕೊಂಡರು. ಅಲ್ಲಿಂದ ಆ ವ್ಯಕ್ತಿ ಸಂಬಂಧಿಕರ ಸಂಖ್ಯೆಯನ್ನು ನೀಡಿದರು. ಅವರಿಗೆ ಕರೆ ಮಾಡಿದಾಗ ಅವರೂ ಬಂದರು. ಬಳಿಕ ಕೂಡಲೇ ಅವರನ್ನು ಕೆಎಂಸಿ ಮಂಗಳೂರಿಗೆ ಕರೆದೊಯ್ಯಲಾಯಿತು. ನಾನು ಮರುದಿನ ಬಸ್ನಲ್ಲಿ ಬೆಂಗಳೂರಿಗೆ ಹೊರಟೆ” ಎಂದು ಹೇಮಾವತಿ ನಡೆದ ಘಟನೆ ವಿವರಿಸುತ್ತಾರೆ.
“ಹೇಮಾವತಿ ಇಲ್ಲದಿದ್ದರೆ ನಾನು ಬದುಕುತ್ತಿರಲಿಲ್ಲ. ನಾನು ಕುಸಿದು ಬಿದ್ದಾಗ ಏನಾಗುತ್ತಿದೆ ಎಂದು ನನಗೆ ತಿಳಿದಿತ್ತು. ಆದರೆ, ಮಾತನಾಡಲು ಸಾಧ್ಯವಾಗಲಿಲ್ಲ. ಡಾ.ಪದ್ಮನಾಭ ಕಾಮತ್ ಅವರನ್ನು ಸಂಪರ್ಕಿಸಿದ ಬಳಿಕ ಅವರ ವೈದ್ಯ ತಂಡ ನನಗೆ ಮರುಜೀವ ನೀದರು” ಎನ್ನುತ್ತಾರೆ ವಿದೇಶದಲ್ಲಿ ಉದ್ಯಮಿಯಾಗಿದ್ದ ಕುಸಿದು ಬಿದ್ದ ವ್ಯಕ್ತಿ.
ಅ.17 ರಂದು ಹೇಮಾವತಿ ಅವರು ತಮ್ಮ ತಾಯಿಯೊಂದಿಗೆ ಕೆಎಂಸಿಗೆ ಬಂದಿದ್ದ ವೇಳೆ ಡಾ. ಕಾಮತ್ ಅವರಿಗೆ ಪ್ರಾಣಾಪಾಯದಿಂದ ಪಾರಾದ ಉದ್ಯಮಿಯವರು, ತನ್ನನ್ನು ರಕ್ಷಿಸಿದ ಹೇಮಾವತಿಯವರನ್ನು ಪರಿಚಯಿಸಿದರು. ಮೊದಲೇ ಘಟನೆ ಬಗ್ಗೆ ತಿಳಿದುಕೊಂಡಿದ್ದ ಡಾ.ಕಾಮತ್ ಅವರು, ಹೇಮಾವತಿಯವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಮಾನವೀಯತೆ ಮೆರೆದ ಉಪನ್ಯಾಸಕಿಯ ಕಾಳಜಿಗೆ ಥ್ಯಾಂಕ್ಸ್ ಹೇಳಲೇಬೇಕು.