ಬಂಟ್ವಾಳ : ತುಳುವಿಗೆ ಮೇಲ್ಸ್ತರದ ಸ್ಥಾನಮಾನವಿದ್ದು, ಪ್ರೀತಿ ವಿಶ್ವಾಸ ತುಳುವರ ಜೀವಾಳವಾಗಿದೆ. ತುಳುವರಿಂದ ತುಳು ಸಂಸ್ಕೃತಿಗೆ ಹಲವು ಕೊಡುಗೆ ಲಭಿಸಿದೆ. ಜನರಿಗೆ ತುಳು ಸಂಸ್ಕೃತಿಯನ್ನು ನೆನಪಿಸುವ ಜತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ನಡೆದ ೨೩ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಾಸಾಯನಿಕಗಳನ್ನು ಮಣ್ಣಿಗೆ ಸೇರಿಸಿ ಮಣ್ಣಿನ ಸಾರ ಕಡಿಮೆ ಮಾಡುವ ಜತೆಗೆ ಆಹಾರ ವಿಷವಾಗಿದೆ. ಅಜ್ಜಿ ಕಥೆಯಲ್ಲಿ ಜೀವನ ಸಾರವನ್ನು ನೀಡುವ ನೈತಿಕ ಮೌಲ್ಯಗಳು ತುಂಬಿದೆ. ಭಾಷೆ – ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಾಗಿದೆ. ಹಿಂದಿನ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಶಕ್ತಿ ಪ್ರಯತ್ನಿಸಬೇಕು. ಮನೆಯಲ್ಲಿ ಬದಲಾವಣೆಯಾದಾಗ ದೇಶ ಬದಲಾಗಲು ಸಾಧ್ಯ ಎಂದು ತಿಳಿಸಿದರು.
ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲ ಮಾತನಾಡಿ ನೆಲ – ಜಲ ಸಂರಕ್ಷಣೆಯ ವಿಚಾರದಲ್ಲಿ ನಮ್ಮ ಹೊಣೆಯಿದ್ದು, ಪರಿಸರವನ್ನು ಉಳಿಸಿ ಮುಂದಿನ ಜನಾಂಗಕ್ಕೆ ನೀಡುವ ಕಾರ್ಯವಾಗಬೇಕಾಗಿದೆ. ಕೃಷಿ ಪ್ರಧಾನವಾದ ತುಳುನಾಡು ಕೈಗಾರಿಕೀಕರಣದತ್ತ ಹೆಚ್ಚು ವಾಲುತ್ತಿದೆ. ಅಭಿವೃದ್ಧಿಯ ಜತೆಗೆ ಕೃಷಿ – ಋಷಿ ಸಂಸ್ಕೃತಿಯೊಂದಿಗೆ ತುಳುವರು ಬೆಳೆಯಬೇಕು ಎಂದು ತಿಳಿಸಿದರು.
ಸಾದ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬೇಲಾಡಿ ವಿಠಲ ಶೆಟ್ಟಿ ಅವರು ಒಡಿಯೂರು ಶ್ರೀಗಳು ತುಳುಲಿಪಿಯ ಕೈಬರಹದ ಈಶಾವಾಸ್ಯೋಪನಿಷತ್ ಬಿಡುಗಡೆಮಾಡಿದರು.
ಅಖಿಲ ಭಾರತ ತುಳು ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಬೆಂಗಳೂರು ತುಳುವರ ಚಾವಡಿ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ. ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್ ಅಧ್ಯಕ್ಷ ರಾಜ್ ಗೋಪಾಲ ರೈ, ಪೂರ್ಣಿಮಾ ಉಪಸ್ಥಿತರಿದ್ದರು.
ರೇಣುಕಾ ಎಸ್. ರೈ ಒಡಿಯೂರು ಪ್ರಾರ್ಥಿಸಿದರು. ಒಡಿಯೂರು ತುಳು ಕೂಡದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಜಯಪ್ರಕಶ್ ಶೆಟ್ಟಿ ಎ. ಅಧ್ಯಕ್ಷರ ಪರಿಚಯ ಮಾಡಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ವಂದಿಸಿದರು. ಲೋಕೇಶ್ ಶೆಟ್ಟಿ ಬಾಕ್ರಬೈಲು ಕಾರ್ಯಕ್ರಮ ನಿರೂಪಿಸಿದರು.