ಬಂಟ್ವಾಳ: ಪಂಜಿಕಲ್ಲು ಮುಕ್ಕುಡದಲ್ಲಿ ನಡೆದ ದುರಂತ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯ ಸಂದರ್ಭ ಸಕಾಲಕ್ಕೆ ಚಿಕಿತ್ಸೆ ದೊರೆಯಲಿಲ್ಲ, ಆಸ್ಪತ್ರೆಗಳನ್ನು ಸುತ್ತಾಡುವಂತಾಯಿತು, ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂಥ ಸನ್ನಿವೇಶಗಳು ಆದಾಗ ಜೀವ ಉಳಿಸಲು ಬೇಕಾದ ಕ್ರಮ ಕೈಗೊಳ್ಳಬೇಕಿತ್ತು. ಜೀವ ಉಳಿಸಲು ಬೇಕಾದ ಸಕಾಲಕ್ಕೆ ಆಕ್ಸಿಜನ್ ಇರುವ ಆಂಬುಲೆನ್ಸ್, ವೈದ್ಯರ ತಂಡ ಅಲ್ಲಿರಬೇಕಿತ್ತು ಆದರೆ ಅದ್ಯಾವುದೂ ಅಲ್ಲಿರಲಿಲ್ಲ ಎಂದರು.
ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಹೋದಾಗ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು ಬಂಟ್ವಾಳದ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಇದೆ ಎಂದಾದರೆ ಯಾಕೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.
ಎರಡು ದಿನಗಳ ಹಿಂದೆ ಪಂಜಿಕಲ್ಲಿನ ಪಂಚಾಯಿತಿ ಸೇವಾ ತಂಡ ನಾಲ್ವರನ್ನು ಜೀವಾಪಾಯದಿಂದ ಪಾರು ಮಾಡಿತು, ಆ ಸಂದರ್ಭದಲ್ಲೇ ಗುಡ್ಡ ಜರಿಯಿತು ಎಂದು ಹೇಳುತ್ತದೆ, ಆದರೆ, ಅಲ್ಲಿಗೆ ಮನೆ ಮಾಲಕಿಯನ್ನೇ ಹೋಗಲು ಬಿಟ್ಟಿಲ್ಲ, ಊರವರೆಲ್ಲರೂ ಹೋಗುತ್ತಾರೆ. ಅವರನ್ನು ಹೋಗಲು ಬಿಟ್ಟದ್ದು ಯಾಕೆ ಮತ್ತು ರಕ್ಷಣೆ ಮಾಡಿದ್ದೇವೆ ಎಂದು ಹೇಳುವುದು ಯಾಕೆ, ರಕ್ಷಣೆ ಯಾರನ್ನು ಮಾಡಿದ್ದು ಎಂದು ಪ್ರಶ್ನಿಸಿದರು.
ಗುಡ್ಡ ಕುಸಿತ, ಮಳೆಹಾನಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ಪರಿಹಾರ ನೀಡಬೇಕು. ಕಳೆದ ವರ್ಷ ಮಳೆಹಾನಿಯಲ್ಲಿ ಸರಿಯಾದ ಪರಿಹಾರ ಸಿಕ್ಕಿಲ್ಲ. ಗೃಹನಿರ್ಮಾಣ ವಸ್ತುಗಳ ಬೆಲೆ ಹೆಚ್ಚಾಗಿದೆ. ಅದಕ್ಕೆ ಸರ್ಕಾರ ಸ್ಪಂದಿಸಬೇಕು. ಸರ್ಕಾರ ಹಣ ಬಿಡುಗಡೆ ಮಾಡುವಾಗ ಕಂಜೂಸುತನ ತೋರಿಸಬಾರದು ಎಂದು ಒತ್ತಾಯಿಸಿದರು.
ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ ಜೈನ್, ಸುದರ್ಶನ ಜೈನ್, ಅಬ್ಬಾಸ್ ಆಲಿ, ಜಯಂತಿ ಪೂಜಾರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.