ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆಗಳ ಸಭೆ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪುರಸಭಾ ಸಭಾಂಗಣದಲ್ಲಿ ನಡೆಯಿತು.
ಪುರಸಭೆಯಲ್ಲಿ ಖಾಲಿಯಾದ ಕಾರ್ಮಿಕರು ಹಾಗೂ ಇತರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ವೇಳೆ ಪರಿಶಿಷ್ಟ ಜಾತಿ ಹಾಗೂ ಪಂಗಡ ದವರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರು ಒತ್ತಾಯ ಮಾಡಿದ್ದಾರೆ, ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಎಸ್. ಸಿ.ಎಸ್.ಟಿ. ಸಭೆಯಲ್ಲಿ ನಡೆದ ವಿಚಾರಗಳು ಕೇವಲ ಪುಸ್ತಕದಲ್ಲಿ ದಾಖಲಾಗಿದ್ದು, ಬಿಟ್ಟರೆ ಯಾವುದು ಕಾರ್ಯರೂಪಕ್ಕೆ ಬರುವುದಿಲ್ಲ, ನಾವು ಯಾಕೆ ಚಾ ಕುಡಿಯಲು ಬರುವುದಾ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ತ್ಯಾಜ್ಯ ವಿಲೇವಾರಿ ವಾಹನ ಮೂರು ದಿನಕ್ಕೊಮ್ಮೆ ಕಾಲೋನಿಗಳಿಗೆ ಬರುತ್ತಿದ್ದು, ಕೊಳೆತ ತ್ಯಾಜ್ಯಗಳಿಂದ ಜ್ವರ ಕೆಮ್ಮು ಇತರ ರೋಗಗಳಿಗೆ ತುತ್ತಾಗುವ ಭೀತಿ ಎದುರಾಗಿದೆ ಎಂದು ಹೇಳಿದರು.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರಿಲ್ಲದೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಒತ್ತಾಯ ಮಾಡಿದಾಗ ಈ ಬಗ್ಗೆ ಡಿ.ಎಚ್.ಒ.ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಜೆಸಿಂತಾ, ಮುಖ್ಯಾಧಿಕಾರಿ ಸ್ವಾಮಿ, ಪ್ರಮುಖರಾದ ಗಂಗಾಧರ, ವಸಂತಿ ಚಂದಪ್ಪ, ಅಮ್ಮು ಅರ್ಬಿಗುಡ್ಡೆ, ಶಿವಮೈರಾನ್ ಪಾದೆ ಸಹಿತ ಅನೇಕರು ಹಾಜರಿದ್ದರು