ಬಂಟ್ವಾಳ: ಕನ್ಯಾನ ಗ್ರಾಮ ಪಂಚಾಯತ್ ಮುಂಭಾಗ ಹಿಂದು ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ರುದ್ರ ಭೂಮಿಯನ್ನು ಇತರೇ ಉದ್ದೇಶಕ್ಕೆ ಬಳಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸಮಾಜ ದೇಶ ಬದಲಾಗಿದೆ ಎಂಬುದನ್ನು ಅರಿಯದೇ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು. ಹಿಂದು ಸಮಾಜ ಜಾಗೃತವಾಗಿದ್ದು, ಹಿಂದು ವಿರೋಧಿ ಆಡಳಿತವನ್ನು ತೊಲಗಿಸುವ ಕಾರ್ಯ ಕನ್ಯಾನದಲ್ಲಿ ಮಾಡುತ್ತೇವೆ. ಹಿಂದು ರುದ್ರ ಭೂಮಿಯ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಹೊರಟವರು ಅನ್ಯ ಧರ್ಮದ ದಫನ ಭೂಮಿಯ ಪಕ್ಕದಲ್ಲಿ ಇದನ್ನು ಮಾಡುವಿರಾ ಎಂದು ಪ್ರಶ್ನಿಸಿದರು.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಜನ ಸಂಖ್ಯೆಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರುದ್ರ ಭೂಮಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ರುದ್ರ ಭೂಮಿಯ ಹಿಂದುಗಳ ಹಕ್ಕಾಗಿದ್ದು, ಅದನ್ನು ತುಂಡರಿಸುವ ಹಕ್ಕು ಪಂಚಾಯಿತಿಗೆ ಇಲ್ಲ. ಶಾಸ್ತ್ರ ಬದ್ಧವಾಗಿ ಸಂಸ್ಕಾರ ನೀಡುವ ಜಾಗದಲ್ಲಿ ತ್ಯಾಜ್ಯ ಘಟಕ ಮಾಡುವುದು ಸರಿಯಲ್ಲ. ಹಿಂದುಗಳು ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ ಎಂದು ತಿಳಿಸಿದರು.
ಕನ್ಯಾನ ರಾಘವೇಂದ್ರ ಭಜನಾ ಮಂದಿರದಿಂದ ಕನ್ಯಾನ ಗ್ರಾಮ ಪಂಚಾಯತ್ ವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಸಹ ಸಂಚಾಲಕ ನರಸಿಂಹ ಮಾಣಿ, ವಿಶ್ವ ಹಿಂದು ಪರಿಷತ್ತ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ವಿ. ನಾಯ್ಕ, ಸದಸ್ಯರಾದ ಕೆ.ಪಿ. ರಘುರಾಮ ಶೆಟ್ಟಿ, ವನಿತಾ ಧರ್ಮರಾಜ್, ಮನೋಜ್ ಬನಾರಿ, ಧರಣಮ್ಮ ಗೌಡ, ಹಿಂದು ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಕೇಶವ ಗೌಡ ಕಾಣಿಚ್ಚಾರು, ಗೌರವಾಧ್ಯಕ್ಷ ಪೂವಪ್ಪ ಗೌಡ ಕಾಣಿಚ್ಚಾರು, ಕಾರ್ಯದರ್ಶಿ ಜಯಪ್ರಸಾದ್ ಬಾಳೆಕ್ಕೋಡಿ, ಜತೆ ಕಾರ್ಯದರ್ಶಿ ಸುಧಾಕರ ಗುರಿಮಾರ್ಗ, ಬಾಳಪ್ಪ ಎನ್. ಕಂಬ್ಳ, ಉಪಾಧ್ಯಕ್ಷ ರಾಜೇಶ್ ಭಟ್ ಕಾಣಿಚ್ಚಾರು, ಊರಿನ ಪ್ರಮುಖರಾದ ಕುಮಾರ್ ಭಟ್ ಬದಿಕ್ಕೋಡಿ, ಲೋಕೇಶ್ ಗೌಡ, ಕೃಷ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.