ಬಂಟ್ವಾಳ: ವ್ಯಕ್ತಿಯಾಗಿ, ಶಕ್ತಿಯಾಗಿ, ದೈವತ್ವವಾಗಿ, ಪೂಜನೀಯ ಸ್ಥಾನಕ್ಕೆ ಪರಿವರ್ತನೆಯಾದವರು ವಾಲ್ಮೀಕಿ, ಅವರ ಆದರ್ಶಗಳನ್ನು ಪಾಲಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡಿನ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ಜಯಂತಿ ಆಚರಣೆ ಮನೆಮನೆಯಲ್ಲೂ ನಡೆಯಬೇಕೆಂದು ಅಭಿಪ್ರಾಯಿಸಿದ ಅವರು ಈ ದಿನ ವಾಲ್ಮೀಕಿ ಬರೆದ ರಾಮಾಯಣದ ನಾಲ್ಕು ಸಾಲುಗಳನ್ನಾದರೂ ನಾವು ಓದುವ ಮೂಲಕ ನಿಜವಾದವಗೌರವ ನೀಡಬೇಕೆಂದರು.
ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ಅವರು, ಭಾರತಬಕಂಡ ಯಾವ ದಾರ್ಶನಿಕರೂ ಜಾತಿಗೆ ಸೀಮಿತವಾದವರಲ್ಲ, ಆದರೆ ಇಂದು ನಾವು ಒಬ್ಬೊಬ್ಬ ದಾರ್ಶನಿಕರನ್ನೂ ಒಂದೊಂದು ಜಾತಿಗೆ, ಮತಕ್ಕೆ ಸೀಮಿತಗೊಳಿಸಿ ಕಟ್ಟಿಹಾಕುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
ಮನುಷ್ಯನ ಬದುಕು ಮೌಲ್ಯಾಧಾರಿತ ವಾಗಿರಬೇಕು ಎಂಬುದನ್ನು ವಾಲ್ಮೀಕಿ ರಾಮಾಯಣ ನಮಗೆ ಕಲಿಸುತ್ತದೆ. ಋಷಿಮುನಿಯಿಂದ ಮಾತ್ರ ಈ ಬಗೆಯ ಕಾವ್ಯ ಸೃಷ್ಟಿಸಲು ಸಾಧ್ಯ, ಸಮಾಜದ ಒಳ ಹೊರಗನ್ನು ಜೊತೆಗೆ ಬದುಕಿನ ಆಳ ಬಲ್ಲವರಿಂದ ಮಾತ್ರ ಇದು ಸಾಧ್ಯ ಎಂದವರು ಅಭಿಪ್ರಾಯಿಸಿದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಆರೋಗ್ಯಾಧಿಕಾರಿ ಡಾ.ಉಮೇಶ್ ಅಡ್ಯಂತಾಯ, ಹಿಂ.ವರ್ಗಗಳ ಇಲಾಖಾ ಅಧಿಕಾರಿ ನರಸಿಂಹ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತ ಕುಮಾರಿ ಸ್ವಾಗತಿಸಿದರು. ಮಂಜುವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಆಶ್ರಮ ಶಾಲಾ ಮೇಲ್ವಿಚಾರಕ ಪ್ರಸಾದ್ ವಂದಿಸಿದರು.