ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಲ್ಲಾಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಪುರುಷ ಮತ್ತು ಮಹಿಳೆಯರ ಕಬಡ್ಡಿ ಹಾಗೂ ಖೋಖೊ ಪಂದ್ಯಾಟವು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ಬುಧವಾರ ನಡೆಯಿತು. ಕ್ರೀಡಾ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಪ್ರತಿಯೊಬ್ಬರೂ ಕ್ರೀಡೆಯನ್ನು ಪ್ರೀತಿಸಿ, ಆರೋಗ್ಯವನ್ನು ವೃದ್ಧಿಸಿ ಎಂದು ಅವರು ಹೇಳಿದರು.
ಕ್ರೀಡೆ ಎಂಬುದು ಬಹುಮಾನವನ್ನು ಪಡೆಯಲು ಮಾತ್ರ ಸೀಮಿವಾಗದೆ, ಗ್ರಾಮೀಣ ಆಟಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದಲೂ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಅವರು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮತ್ತು ಆರೋಗ್ಯ ಕರ ಪೈಪೋಟಿ ನೀಡುವ ಗುಣ ಮಕ್ಕಳಲ್ಲಿ ಬೆಳೆಯಬೇಕು ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ರವರು ತೆಂಗಿನ ಕಾಯಿಒಡೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರ ದೇಶೀಯ ಕ್ರೀಡೆಗಳಾದ ಕಬಡ್ಡಿ ಹಾಗೂ ಖೋ ಖೋ ಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕ್ರೀಡಾ ಪಟುಗಳನ್ನು ಬೆಂಬಲಿಸಲು ಇಂತಹಾ ಕ್ರೀಡಾ ಕೂಟಗಳನ್ನು ಆಯೋಜಿಸಿರವುದು ಶ್ಲಾಘನೀಯ ಎಂದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಾರಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದು, ತಾಲೂಕು ಮಟ್ಟದಲ್ಲಿ ವಿಜೇತರಾದವರಿಗೆ ಮುಂದಿನ ಹಂತದಲ್ಲಿ ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ, ಕ್ರೀಡೆ ನೀಡುವ ಸಂತೋಷವನ್ನು ಎಲ್ಲರೂ ಆಟದ ಮೂಲಕ ಅನುಭವಿಸಬೇಕು, ಗೆಲುವು ನೀಡುವಾಅ ಸಂತಸಗಿಂತಲೂ ಆಟ ಆಡುವಾಗ ಸಿಗುವ ಖುಷಿ ಹೆಚ್ಚು ಪ್ರಾಮುಖ್ಯವಾದದ್ದು ಎಂದರು. ಶ್ರೀರಾಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋಪಾಲ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣುನಾರಾಯಣ ಹೆಬ್ಬಾರ್,ಸಹಾಯಕ ನಿರ್ದೇಶಕ ದಿನೇಶ್ ಎಂ.,ಗ್ರಾಮಪಂಚಾಯತ್ ಅಧ್ಯಕ್ಷರುಗಳಾದ ಕು.ಹಿರಣ್ಮಯಿ ಬಾಳ್ತಿಲ, ಅಭಿಷೇಕ್ ಶೆಟ್ಟಿ ಗೋಳ್ತಮಜಲು, ಪ್ರವೀಣ್ ಬಿ.ತುಂಬೆ, ಹರ್ಷಿಣಿ ಪುಷ್ಪಾನಂದ, ಭಾರತಿ ರಾಜೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ.ಸಿಬ್ಬಂದಿ ಅಶೋಕ್ ಬರಿಮಾರು ಸ್ವಾಗತಿಸಿದರು, ಶಿಕ್ಷಕ ಜಯರಾಂ ಕಾರ್ಯಕ್ರಮ ನಿರ್ವಹಿಸಿದರು.