ಬಂಟ್ವಾಳ : ಫಾದರ್ ಮುಲ್ಲರ್ ಆಸ್ಪತ್ರೆ ವತಿಯಿಂದ ತುಂಬೆಯಲ್ಲಿ ಆರಂಭಿಸಿದ ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್, ಸಮಾಜಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರಾದ ರೆ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಹೇಳಿದ್ದಾರೆ.
ಅವರು ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನೂತನವಾಗಿ ಆರಂಭಗೊಂಡ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಬುಧವಾರ ನಡೆದ ಬಿಎಸ್ ಸಿ ನರ್ಸಿಂಗ್ ಕೋರ್ಸ್ ಗೆ ಚಾಲನೆ ನೀಡಿದ ಬಳಿಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ ಕ್ಷೇತ್ರ, ಅದರಲ್ಲೂ ವಿಶೇಷವಾಗಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ತನ್ನದೇ ಆದ ವೈಶಿಷ್ಯತೆ ಪಡೆದುಕೊಂಡಿದೆ. ಇಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳು ಪುಣ್ಯವಂತರು ಎಂದರು.ಉತ್ತಮ ವ್ಯವಸ್ಥೆಯ ಜೊತೆಗೆ ವಿದ್ಯಾರ್ಥಿ ಗಳ ಕಲಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮಾನವೀಯತೆಯೊಂದಿಗೆ ಬದುಕಬೇಕು.
ಪ್ರೀತಿ ಸಹಭಾಳ್ವೆ ಯ ಜೊತೆಗೆ ಮಾನವೀಯತೆಯನ್ನು ಸಾರಬೇಕು. ಪ್ರತಿಭಾನ್ವಿತರಾಗಿ ಸಮಾಜಕ್ಕೆ ಸಂಪತ್ತು ಆಗಬೇಕು ಶಿಸ್ತು, ಗುರಿ, ಶ್ರದ್ಧೆಯಿಂದ ಯಶಸ್ಸನ್ನು ಕಾಣುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಸಿಟಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ರೆನಿಲ್ಡಾ ಶಾಂತಿ ಲೋಬೋ ರವರು ಮಾತನಾಡಿ, ಸೇವಾ ಬದ್ಧತೆಯ ಆಶಯದೊಂದಿಗೆ ನರ್ಸಿಂಗ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದೀರಿ, ಸಕಾರಾತ್ಮಕ ಮನೋಭಾವ ಇದ್ದಾಗ ನರ್ಸಿಂಗ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅವಕಾಶಗಳು ತೆರೆದಿದ್ದು, ಕಠಿಣ ಪರಿಶ್ರಮದ ಮೂಲಕ ಯಶಸ್ಸು ಕಾಣಬೇಕು, ನಮ್ಮ ನಡವಳಿಕೆ ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ಅವರು ಹೇಳಿದರು.
ತುಂಬೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಧನ್ಯಾ ದೇವಾಸಿಯಾ ಎಂ ರವರು ಮಾತನಾಡಿ, ಶ್ರದ್ಧೆ, ಸಂಯಮ ಹಾಗೂ ಬದ್ಧತೆಯೊಂದಿಗೆ ಕಲಿತ ಶಿಕ್ಷಣ ಸುಂದರ ಬದುಕಿಗೆ ದಾರಿದೀಪವಾಗುತ್ತದೆ, ಪ್ರೀತಿ ಮತ್ತು ಸೇವಾ ಮನೋಭಾವನೆ ಇದ್ದಾಗ ಮಾತ್ರ ದೇವರು ನಮ್ಮ ಜೊತೆಗೇ ಇರುತ್ತಾನೆ, ಕಠಿಣ ಪರಿಶ್ರಮದ ಜೊತೆಗೆ ಕಲಿಕೆಯಲ್ಲೂ, ಜೀವನದಲ್ಲೂ ಯಶಸ್ಸು ಕಾಣುವಂತೆ ಅವರು ಶುಭ ಹಾರೈಸಿದರು.
ವೈದ್ಯಕೀಯ ಅಧೀಕ್ಷಕ ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ವಂ. ಸಿಲ್ವೆಸ್ಟರ್ ವಿ ಲೋಬೋ, ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಸಿಲ್ವಿಯಾ ನಿಶಾ ಲೋಬೋ ವಂದಿಸಿದರು. ಅಲಿಶಾ ಕಾರ್ಯಕ್ರಮ ನಿರ್ವಹಿಸಿದರು.